ಪುಸ್ತಕ ಓದಿದಷ್ಟು ಸುಖ, ಶಾಂತಿ ; ಜ್ಞಾನ ಹಂಚಿದಷ್ಟು ಅಕ್ಷಯ
ಗೊರವಾಲೆ ಗ್ರಾಮದ ಮಧುಸೂದನ್ ನರಸಿಂಹೇಗೌಡರ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ
ಪಾಲನೆ ನ್ಯೂಸ್ & ವ್ಯೂಸ್
ಮಂಡ್ಯ: ಮನೆಗೊಂದು ಮರ ಊರಿಗೊಂದು ವನ ರೀತಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯವಿರಬೇಕು. ಮರಗಳಿಂದ ಪರಿಸರ ಉಳಿದರೆ, ಗ್ರಂಥಾಲಯಗಳಿಂದ ಜನರು ಬುದ್ಧಿವಂತರಾಗುತ್ತಾರೆ ಎಂದು ಪರಿಸರ ಮಿತ್ರರು, ಡಯಟ್ ವಿಶ್ರಾಂತ್ ಉಪನ್ಯಾಸಕರಾದ ಜಯಶಂಕರ್ ಜಿ.ಸಿ. ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಗೊರವಾಲೆ ಗ್ರಾಮದ ಉಪನ್ಯಾಸಕ ಮಧುಸೂದನ್ ನರಸಿಂಹೇಗೌಡ ಅವರ ಮನೆಯಲ್ಲಿ ಸೋಮವಾರ ಸಂಜೆ (ಮೇ18) ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗೆಪುಸ್ತಕ ಬೆಸ್ಟ್ ಫ್ರೆಂಡ್, ಆಪದ್ಬಾಂಧವ. ಅದರ ಸಹವಾಸದಲ್ಲಿ ನೋವಿಲ್ಲ ಸಂತಸವೇ ಎಲ್ಲ. ಪುಸ್ತಕ ಓದಿದಷ್ಟು ಸುಖ, ಶಾಂತಿ. ಜ್ಞಾನವನ್ನು ಹಂಚಿದಷ್ಟು ಅಕ್ಷಯವಾಗುತ್ತದೆ. ರೀಲ್ಸ್, ವಾಟ್ಸಾಪ್, ಚಾಟಿಂಗ್ ನಲ್ಲಿ ಮುಳುಗಿರುವ ಯುವಜನರನ್ನು ಓದಲು ಕರೆ ತರಬೇಕು. ಪುಸ್ತಕದಿಂದ ಜ್ಞಾನ ವೃದ್ಧಿ , ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ ಬಳಸುವುದರಿಂದ ಪರಿಸರ ರಕ್ಷಣೆ ಆಗುತ್ತದೆ ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾದ ಗೊರವಾಲೆ ಚಂದ್ರಶೇಖರ್ ಮಾತನಾಡಿ, ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಒಂದಲ್ಲ ಒಂದು ದಿನ ಫಲ ನೀಡುತ್ತದೆ ಎನ್ನುವ ಮಾತಿನ ಹಾಗೆ ಅಕ್ಷರ ಜ್ಞಾನ ಬದುಕು ಕಟ್ಟಿಕೊಡುತ್ತದೆ. ಆ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲಾ ಜಾಗೃತ ಸಮಿತಿ ಸದಸ್ಯೆ ಡಾ. ಕೆಂಪಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿ, ಸುಂದರ ಮನೆ ಬಾಹ್ಯ ವಿಕಾಸಕ್ಕಾದರೆ, ಮನೋವಿಕಾಸಕ್ಕೆ ಪುಸ್ತಕಗಳು. ಸರ್ವತೋಮುಖ ವ್ಯಕ್ತಿತ್ವ ರೂಪಿಸಿಕೊಳ್ಳಲು ಪಠ್ಯಪುಸ್ತಕಗಳಿಂದಾಚೆಗಿನ ಓದು ನೆರವಾಗುತ್ತದೆ. ಸಮಾಜ ಅರ್ಥವಾಗಲು, ಒಳ್ಳೆಯದು ಕೆಟ್ಟದ್ದು ತಿಳಿದುಕೊಳ್ಳಲು, ನೆಮ್ಮದಿ ಬೇಕಾದರೆ ಪುಸ್ತಕ ಓದಬೇಕು ಎಂದು ತಿಳಿಸಿದರು.

ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾರಸವಾಡಿ ಮಹಾದೇವ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಬೈಲ್ ಮತ್ತು ಟಿವಿ ಹಾವಳಿ ನಡುವೆ ಮಕ್ಕಳ, ವಯಸ್ಕರ ಮನಸ್ಸು ಬದಲಾಯಿಸಿ ಸರಿ ದಾರಿ ತೋರಿಸುವ ಶಕ್ತಿ ಪುಸ್ತಕಗಳಿಗಿವೆ. ಮನೆಗೊಂದು ಗ್ರಂಥಾಲಯ ಸ್ವಾವಲಂಬನೆಯ ವೇದಿಕೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ಸನ್ಮಾನ, ಅಭಿನಂದನಾ ಪತ್ರ: ಮನೆಗೊಂದು ಗ್ರಂಥಾಲಯ ಅನುಷ್ಠಾನ ಮಾಡಿದ ಮಧುಸೂದನ್ ನರಸಿಂಹೇಗೌಡ ಹಾಗೂ ತಂದೆ ತಾಯಿಯನ್ನು ಇದೇ ಸಂದರ್ಭದಲ್ಲಿ ಜಾಗೃತ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ಮುಖಂಡ ಜಿ.ಬಿ. ಜಯರಾಮು, ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಚಂದ್ರಶೇಖರ ದ.ಕೋ.ಹಳ್ಳಿ, ಮಂಚಶೆಟ್ಟಿ ಎಂ., ಉಮೇಶ ದಡಮಹಳ್ಳಿ, ಸದ್ದಾಂ ತಗ್ಗಹಳ್ಳಿ ಉಪಸ್ಥಿತರಿದ್ದರು.
