VIEWS

ಆದರ್ಶಗಳು ಇಲ್ಲದಿದ್ದರೆ ಪ್ರಗತಿಯೇ ಇರುವುದಿಲ್ಲ

ಬದುಕಲು ಬೇಕು ಬದುಕುವ ಈ ಮಾತು |ಡಾ. ಪಾಟೀಲ ಪುಟ್ಟಪ್ಪ


ಪಾಲನೆ ಚಿಂತನೆ

ವಾಸ್ತವ ಏನೇ ಇದ್ದರೂ ಮನುಷ್ಯನ ಎದುರಿನಲ್ಲಿ ಒಂದು ಆದರ್ಶ ಇರಬೇಕು, ಈ ಆದರ್ಶವನ್ನು ಇರಿಸಿಕೊಂಡಿತೆನ್ನುವ ಕಾರಣದಿಂದಲೇ ಮನುಕುಲ ಪ್ರಗತಿಯನ್ನು ಸಾಧಿಸಿದೆ. ಅಭ್ಯುದಯವನ್ನು ಕಂಡಿದೆ.

ಮನುಷ್ಯ ಯಾವನೇ ಇರಲಿ, ಅವನು ಒಬ್ಬ ಒಡೆಯನಿಗೋಸುಗ ಕೆಲಸ ಮಾಡಬೇಕಾಗುತ್ತದೆ. ಆ ಒಡೆಯ ಬೇರೆ ಯಾರೂ ಅಲ್ಲ. ಅವನ ಕೆಲಸವೇ ಅವನ ಒಡೆಯ. ಅವನ ಆದರ್ಶವೇ ಅವನ ಒಡೆಯ.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಸಮೀಪ ದೃಷ್ಟಿ ಇರುವಂತೆ ದೂರದ ದೃಷ್ಟಿಯೂ ಇರಬೇಕು. ಸಮೀಪ ದೃಷ್ಟಿಯೇ ವಾಸ್ತವ, ದೂರ ದೃಷ್ಟಿಯೇ ಆದರ್ಶ, ಮನುಷ್ಯನ ಜೀವನ ಪೂರ್ಣವೆನಿಸಬೇಕಾದರೆ ಅವನಲ್ಲಿ ವಾಸ್ತವ ಮತ್ತು ಆದರ್ಶ, ಎರಡೂ ಇರಬೇಕು.

ಆದರ್ಶವಾದಿಗಳು ಜನಪದಕ್ಕೆ ಅನುಪಮ ಸೇವೆಯನ್ನು ಸಲ್ಲಿಸುತ್ತಾರೆ. ಅವರಿಂದ ಜನರಿಗೆ ದೂರದ ಗುರಿಗಳು ಕಾಣಿಸುತ್ತವೆ. ಆ ಗುರಿಯ ದೃಷ್ಟಿ ಇದ್ದರೇನೇ, ಅದನ್ನು ಹೋಗಿ ತಲುಪುವ ಹಾದಿಯನ್ನು ನಡೆದು ಹೋಗುವುದಕ್ಕೆ ಬರುತ್ತದೆ.

ಈ ಆದರ್ಶದಂಥ ಮಾದಕವಸ್ತು ಜೀವನದಲ್ಲಿ ಇನ್ನೊಂದಿಲ್ಲ. ಆದರ್ಶದ ಭಾವನೆ ತಂದುಕೊಡುವ ಆಹ್ಲಾದಕತೆಯನ್ನು ಈ ಜಗತ್ತಿನಲ್ಲಿ ಬೇರೆ ಯಾವುದೂ ತಂದುಕೊಡಲಾರದು.

ಯೌವ್ವನದಲ್ಲಿ ಸುಂದರ ಕನಸುಗಳ ಭವ್ಯ ದರ್ಶನಗಳೇ ತುಂಬಿಕೊಂಡಿರುತ್ತವೆ. ಭವಿಷ್ಯತ್ತಿನ ಆಸೆಗಳು, ಅವುಗಳನ್ನು ಸಾಧಿಸುವ ಯೋಜನೆಗಳು ಅವನ ಮೈಮನಸ್ಸುಗಳನ್ನು ತುಂಬಿಕೊಂಡು ಅಲ್ಲಿ ಯಾವುದಕ್ಕೂ ಇಂಬು ಇಲ್ಲದಂತೆ ಮಾಡಿರುತ್ತವೆ. ತನ್ನನ್ನು ತಡೆಯುವವರು ಯಾರೂ ಇಲ್ಲವೆಂದು ಅವನು ಯಶಸ್ಸಿನ ಹಾದಿಯನ್ನು ತುಳಿಯುತ್ತ ಹೊರಟಿರುತ್ತಾನೆ.

ಎಲ್ಲಿ ಆದರ್ಶ ಇದೆಯೋ, ಅಲ್ಲಿ ಶಬ್ದಗಳಲ್ಲ, ಕೃತಿ ಇರಬೇಕು. ಕೃತಿಯಿಲ್ಲದ ಶಬ್ದಗಳು ಆದರ್ಶವನ್ನು ಕೊಲೆ ಮಾಡುತ್ತವೆ.

ಆದರ್ಶಗಳನ್ನು ಸಾಧಿಸುವುದಕ್ಕೆ ಆಗಲಿಲ್ಲವೆಂದು ಯಾರೊಬ್ಬರೂ ತಮ್ಮ ಮನಸ್ಸನ್ನು ಮುದುಡಿಕೊಳ್ಳಬಾರದು. ನಕ್ಷತ್ರಗಳಂತೆ, ನಾವು ಇರಿಸಿಕೊಂಡ ಆದರ್ಶಗಳನ್ನು ಹೋಗಿ ಮುಟ್ಟುವುದಕ್ಕೆ ಆಗದೇ ಹೋಗಬಹುದು. ಆದರೆ, ಆದರ್ಶಗಳು ನಾವು ತುಳಿಯಬೇಕಾದ ಹಾದಿಯನ್ನು ನಮಗೆ ತೋರಿಸುತ್ತವೆ. ನಾವು ನಡೆಯಬೇಕಾದ ಹಾದಿ ನಮಗೆ ಸ್ಪಷ್ಟವಾಗಿ ಕಾಣಿಸುತ್ತದೆ.

ಮನುಷ್ಯನು ತನ್ನ ಆದರ್ಶಗಳಿಂದ ಉತ್ತಮನೆನಿಸುತ್ತಾನೆ. ತಾನು ಮಾಡುವ ಕೆಲಸದಲ್ಲಿ ಶ್ರೇಷ್ಠತೆಯನ್ನು ತಂದುಕೊಳ್ಳುತ್ತಾನೆ. ಆದರ್ಶಗಳು ಮನುಷ್ಯನಿಗೆ ಜಿಗಿಯುವ ಹಲಗೆಯಂತೆ ಉಪಯೋಗವಾಗುತ್ತದೆ.


ಪಾಟೀಲ್ ಪುಟ್ಟಪ್ಪ (14 ಜನವರಿ 1921 – 16 ಮಾರ್ಚ್ 2020). ಪತ್ರಕರ್ತ, ಸಾಹಿತಿ, ಕನ್ನಡ ಪರ ಹೋರಾಟಗಾರ. ಕನ್ನಡಿಗರೆಲ್ಲರಿಗೂ `ಪಾಪು’ ಎಂದೇ ಚಿರಪರಿಚಿತರು. ವಿಶಾಲ ಕರ್ನಾಟಕ ದಿನಪತ್ರಿಕೆ, ನವಯುಗ ಮಾಸ ಪತ್ರಿಕೆ ಸಂಪಾದಕರಾಗಿದ್ದರು.1954ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1957ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟ್ ಪ್ರಾರಂಭಿಸಿದರು. 1959ರಲ್ಲಿ ವಿಶ್ವವಾಣಿ ದೈನಿಕ, ಮನೋರಮಾ ಎಂಬ ಚಲನಚಿತ್ರ ಮಾಸಿಕ ಆರಂಭಿಸಿದರು.

Related posts

ಗಾಯತ್ರಿ ಮಂತ್ರ: ಅರ್ಥ ಮತ್ತು ಲಾಭಗಳು

ಮೇ 1 ಬುದ್ಧ ಪೂರ್ಣಿಮೆ ; ಕರುಣಾಮೂರ್ತಿಗೆ ಕಾವ್ಯ ನಮನ

ವರ್ಣ ಪಲ್ಲಟ: ಹುಟ್ಟು ಹಾಕಿದ ನೂರಾರು ಪ್ರಶ್ನೆಗಳು

Leave a Comment