ಪಿ.ಲಂಕೇಶ್ ಆಶಯದ ಕವಿ ಗೋಷ್ಠಿ
ಪಾಲನೆ ನ್ಯೂಸ್
ಮಂಡ್ಯ: ವಸಂತ ಕಾಲಕ್ಕೂ ಕಾವ್ಯರಚನೆಗೂ ಅವಿನಾಭಾವ ಸಂಬಂಧವಿದೆ. ವರ್ತಮಾನದ ತಲ್ಲಣಗಳಿಗೆ ದನಿಯಾಗುತ್ತ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಕವಿಯಷ್ಟೇ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸಕ್ಕರೆ ನಾಡು ಮಂಡ್ಯದ ಗಾಂಧಿಭವನದಲ್ಲಿ ಫೆ.25ರ ಸಂಜೆ 4 ಗಂಟೆಗೆ ಪಿ.ಲಂಕೇಶರ ಆಶಯದಂತೆ ಅಕ್ಷರ ಹೊಸ ಕಾವ್ಯ ಕವಿಗೋಷ್ಠಿಯನ್ನು ಪರಿಚಯ ಪ್ರಕಾಶನ ಆಯೋಜಿಸಿದೆ.
‘ಪರಿಚಯ ಪ್ರಕಾಶನ’, ಕಳೆದ ಹಲವು ವರ್ಷಗಳಿಂದ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ 70ರ ದಶಕದಲ್ಲಿ ಸದ್ದು ಮಾಡಿದ್ದ “ಅಕ್ಷರ ಹೊಸ ಕಾವ್ಯ” ವಸಂತ ಕವಿಗೋಷ್ಠಿಯನ್ನು ಏರ್ಪಡಿಸಿದೆ. ಜಿಲ್ಲೆಯ 40 ಕ್ಕೂ ಹೆಚ್ಚು ಹಿರಿಯ, ಕಿರಿಯ ಕವಿಗಳು ಭಾಗವಹಿಸಿ ಕಾವ್ಯ ಸುಧೆ ಹರಿಸಲಿದ್ದಾರೆ. ನೆಮ್ಮದಿಯ, ಸದೃಢ ಸಮಾಜ ಕಟ್ಟಲು ಕಾವ್ಯ ಕಾಣಿಕೆ ನೀಡಲಿದ್ದಾರೆ.
ಚಳಿಗಾಲ ಮತ್ತು ಬೇಸಿಗೆ ಕಾಲಗಳ ನಡುವೆ ಬರುವ ವಸಂತ ಕಾಲ ಪ್ರಕೃತಿಯಲ್ಲಿ ನವೋಲ್ಲಾಸವನ್ನು ತರುತ್ತದೆ. ಎಲೆಗಳೆಲ್ಲ ಉದುರಿ ಹೊಸ ಚಿಗುರು ಹೊಸ ಮನ್ವಂತರದೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಎಲ್ಲ ಕವಿಗಳಿಗೆ ಮತ್ತು ಕಾವ್ಯಪ್ರೇಮಿಗಳಿಗೆ ಈ ಋತು ಚೇತೋಹಾರಿ.




