NEWS

ಶಾಸಕರಿಂದ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಪಾಲನೆ ನ್ಯೂಸ್

ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಬೆಟ್ಟಗೇರಿ-ಹೆರವನಾಡು-ಕೇಟೋಳಿ-ಕಾರಗುಂದ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.

ಹೆರವನಾಡು ಗ್ರಾಮ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡ ಶಾಸಕರು, ಕಾಳೇರಮ್ಮನ ಐನ್ ಮನೆ, ಕಡ್ಯದ ಐನ್ ಮನೆ, ನಿಂಗಪ್ಪನ ಐನ್ ಮನೆಗೆ ತೆರಳುವ ರಸ್ತೆಗಳಿಗೆ ನೂತನವಾಗಿ ಕಾಂಕ್ರೀಟೀಕರಣಗೊಳಿಸಲು ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಭಾಗದ ಜನರು ಈ ಹಿಂದೆ ತನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ದಶಕಗಳಿಂದ ಈ ಭಾಗ ಭಾಗಕ್ಕೆ ಯಾವುದೇ ರೀತಿಯ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅನುದಾನಗಳು ಒದಗಿಲ್ಲ. ಈ ಹಿಂದೆ ಹೆಚ್ಚಿನ ಕೆಲಸಗಳು ಆಗಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು.

ಜನರ ಮನವಿಗೆ ಸ್ಪಂದಿಸಿ ಈ ಭಾಗಕ್ಕೆ ರಸ್ತೆ ಅಭಿವೃದ್ಧಿಪಡಿಸಲು ಅನುದಾನವನ್ನು ಒದಗಿಸಲಾಗಿದೆ ಎಂದರು. ಹೆರವನಾಡು ಮೇದರ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು, ಕುಡಿಯುವ ನೀರು, ರಸ್ತೆ ಹಾಗೂ ಇತರ ವಿಷಯಗಳ ಬಗ್ಗೆ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಪರಿಹಾರ ಮಾಡಿಕೊಡಲು ಸೂಚಿಸಿದರು.

ಬೆಟ್ಟಗೇರಿ ಪಂಚಾಯಿತಿ ಅಧ್ಯಕ್ಷೆ ಕಮಲ ಉತ್ತಯ್ಯ, ಮುಖಂಡರಾದ ಕೇಟೋಳಿ ಮೋಹನ್ ರಾಜ್, ಕುಮಾರ್, ದೀಪಕ್, ಬೆಟ್ಟಗೇರಿ ವಲಯ ಅಧ್ಯಕ್ಷ ಕೊಡಗನ ತೀರ್ಥ ಪ್ರಸಾದ್, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಸುರೇಶ್, ನಾಪಂಡ ಗಣೇಶ್, ಸಾಬು, ಹನೀಫ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ತುಳಸಿ ಗಾಂಧಿ ಪ್ರಸಾದ್, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹಂಸ ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಪುನೀತ್‌ರಾಜ್‌ಕುಮಾರ್‌ರವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪು ಇಲ್ಲ: ಡಿಕೆಶಿ ಸ್ಪಷ್ಟನೆ

ಫೆ.2ರಂದು ಎಂ.ಶ್ರೀನಿವಾಸ್ ಅಭಿನಂದನಾ ಗ್ರಂಥ ಬಿಡುಗಡೆ, ಪ್ರಶಸ್ತಿ ಪ್ರದಾನ ಸಮಾರಂಭ

Leave a Comment