ಪಾಲನೆ ನ್ಯೂಸ್
ಮಂಡ್ಯ: ಸ್ವಾಮಿ ವಿವೇಕಾನಂದರ ಆದರ್ಶ, ಚಿಂತನೆಗಳು, ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರ ಮೂಲಕ ದೇಶಕ್ಕೆ ಮಾದರಿ ವ್ಯಕ್ತಿಗಳಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಡ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಮೈ ಭಾರತ್ ಕೇಂದ್ರ, ಮಂಡ್ಯ ವಿಶ್ವ ವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಹಾಗೂ ಗಣಕ ವಿಜ್ಞಾನ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ 63ನೇ ಜನ್ಮ ದಿನೋತ್ಸವದ ಅಂಗವಾಗಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ “ರಾಷ್ಟ್ರೀಯ ಯುವ ದಿನ”ವನ್ನು ದೀಪ ಬೆಳಗಿಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜನವರಿ 12 ವಿಶೇಷವಾದ ದಿನ. 1860 ದಶಕದಲ್ಲಿ ಭಾರತ ಮೊದಲನೇ ಮಹಾ ಯುದ್ಧದಲ್ಲಿ ಸೋತಿರುತ್ತದೆ. ಭಾರತದಲ್ಲಿ ಅಪಾರ ಸಾವು ನೋವುಗಳು ಸಂಭವಿಸಿರುತ್ತವೆ. ಇಡೀ ದೇಶ ಕತ್ತಲೆಯಿಂದ ಕೂಡಿದ ಸಂದರ್ಭದಲ್ಲಿ ದಿವ್ಯಚೇತನರಾಗಿ ಬಂದವರು ಸ್ವಾಮಿ ವಿವೇಕಾನಂದ ಅವರು. ಒಂದು ದೇಶದಲ್ಲಿ ಪ್ರತಿ ಸಾವಿರ ವರ್ಷಗಳಿಗೆ ಒಬ್ಬರು ಮಹಾನ್ ವ್ಯಕ್ತಿ ಗಳು ಜನಿಸುತ್ತಾರೆ ಅಂತವರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು ಎಂದು ಹೇಳಿದರು.
ಎಷ್ಟು ವರ್ಷ ಬದುಕಿದ್ದರೂ ಎನ್ನುವುದು ಮುಖ್ಯವಲ್ಲ ಬದುಕಿದಂತಹ ಅವಧಿಯಲ್ಲಿ ಸಮಾಜಕ್ಕೆ ಅವರು ಏನು ಕೊಡುಗೆ ನೀಡಿದರು ಎನ್ನುವುದು ಮುಖ್ಯ. ಇಡೀ ವಿಶ್ವ ಭಾರತವನ್ನು ಅತ್ಯಂತ ಘನತೆ ಮತ್ತು ಗೌರವದಿಂದ ನೋಡುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರನ್ನು ವಿಶ್ವಗುರು ಎಂದು ಕರೆಯಲಾಗುತ್ತದೆ. ಭಾರತದ ಸನಾತನ ಸಂಸ್ಕೃತಿ ಯನ್ನು ವಿಶ್ವಕ್ಕೆ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸ್ವಾಮಿ ವಿವೇಕಾನಂದರು ಸಂತರಾಗಿ, ಚಿಂತಕರಾಗಿ ಮತ್ತು ತತ್ವಜ್ಞಾನಿಯಾಗಿ ಭಾರತೀಯ ಸಂಸ್ಕೃತಿ ಪರಂಪರೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಚಿಂತನೆಗಳು ಆದರ್ಶಗಳು ನಮ್ಮ ಜೊತೆ ಇಂದಿಗೂ ಜೀವಂತವಾಗಿವೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ನಂಬಿದ್ದ ಒಂದು ಶಕ್ತಿ ಎಂದರೆ ಅದು ಭಾರತದ ಯುವ ಶಕ್ತಿ. ಯುವ ಸಮೂಹ ಸರಿ ದಾರಿಯಲ್ಲಿ ಹೋದರೆ ಮಾತ್ರ ಈ ದೇಶವನ್ನು ಸಮೃದ್ಧ ದೇಶೀಯವಾಗಿ ನಿರ್ಮಿಸಬಹುದು ಎಂಬ ಕನಸು ಕಂಡಿದ್ದರು.
1893 ಸಪ್ಟೆಂಬರ್ 11 ರಂದು ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಸಂಸ್ಕೃತಿಯ ಪರಂಪರೆಯನ್ನು ಎತ್ತಿ ಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯುವ ಪೀಳಿಗೆ ಇತಿಹಾಸ ತಿಳಿಯಬೇಕು. 1890 ರಲ್ಲಿ ಭಾರತ ದೇಶವನ್ನು ಬಿಟ್ಟು 1893 (3ವರ್ಷ) ರವರೆಗೆ ವಿಶ್ವದ ಎಲ್ಲಾ ಸಮ್ಮೇಳನಗಳಲ್ಲಿ ಭಾಗಿಯಾಗಿ ಪ್ರವಚನಗಳನ್ನು ನೀಡಿ ಭಾರತದ ಸಂಸ್ಕೃತಿಯ ಪ್ರತೀಕವಾಗಿ ವಿಶ್ವಕ್ಕೆ ಭಾರತ ಎಂದರೆ ಏನು ಎಂದು ತಿಳಿಸಿಕೊಟ್ಟ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಎಂದು ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರು ಅಮೆರಿಕಾದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಇವತ್ತಿಗೂ ಇಡೀ ವಿಶ್ವವೇ ಅವರ ಭಾಷಣವನ್ನು ಕೊಂಡಾಡಿ ಗುರುತಿಸುವಂತೆ ಮಾಡಿದ್ದಾರೆ. ನಮ್ಮ ದೇಶವನ್ನು ಹೊರ ದೇಶಗಳು ಅತ್ಯಂತ ಗೌರವ ಘನತೆಯಿಂದ ಕಾಣುವುದಕ್ಕೆ ಕಾರಣ ಅವರ ವಾಕ್ಚಾತುರ್ಯ. ಭಾರತ ದೇಶವನ್ನು ತಿಳಿದುಕೊಳ್ಳಲು ಸ್ವಾಮಿ ವಿವೇಕಾನಂದರ ಕುರಿತಾಗಿ ಓದಿ ಎಂದು ಹೇಳಿದರು.
ಯುವಕ ಯುವತಿಯರಿಗೆ ಸ್ಪಷ್ಟವಾದ ಗುರಿ, ನಂಬಿಕೆ,ಶಕ್ತಿ, ವಿಶ್ವಾಸ ಇರಬೇಕು. ದೇವರನ್ನ ನಂಬುವುದು ಮುಖ್ಯವಲ್ಲ ನಿಮ್ಮಲ್ಲಿರುವ ದೃಢತೆಯ ಮೇಲೆ ನಂಬಕೆ ಇರಬೇಕು. ಗುರಿ ಎಷ್ಟು ಮುಖ್ಯನೋ ದಾರಿಯೂ ಅಷ್ಟೇ ಮುಖ್ಯ. ಸಮಾಜದಲ್ಲಿ ಬುದ್ದಿವಂತರಾಗಿ ಪ್ರಜ್ಞಾವಂತರಾಗಿ ಮತ್ತು ಹೃದಯವಂತಿಕೆಯಿಂದ ಬದುಕಬೇಕು ಎಂದು ಹೇಳಿದರು.
ಮಂಡ್ಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಶಿವಚಿತ್ತಪ್ಪರವರು ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಜನತೆಗೆ ಸ್ಫೂರ್ತಿ. ಎಷ್ಟು ವರ್ಷ ಸೇವೆ ಸಲ್ಲಿಸುತ್ತೇವೆ ಎಷ್ಟು ವರ್ಷ ಜೀವಿಸುತ್ತೇವೆ ಎನ್ನುವುದು ಮುಖ್ಯವಲ್ಲ ನಮ್ಮ ಅವಧಿಯಲ್ಲಿ ಎಷ್ಟು ಕೆಲಸ ಕಾರ್ಯಗಳು ಆಗಿವೆ ಎನ್ನುವುದು ಮುಖ್ಯ. ಸ್ವಾಮಿ ವಿವೇಕಾನಂದ ಅವರು ರಾಮಕೃಷ್ಣ ಪರಮಹಂಸರ ಆಪ್ತ ಶಿಷ್ಯರಾಗಿದ್ದರು. ಗುರು ಶಿಷ್ಯರ ಸಂಬಂಧ ಮುಖ್ಯವಾದದ್ದು ಎಂದು ಮಾತನಾಡಿದರು
ಮಂಡ್ಯ ಆರಕ್ಷಕ ಅಧೀಕ್ಷಕರಾದ ಶೋಭಾರಾಣಿ ವಿ.ಜೆ. ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇತಿಹಾಸ ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು. ಯುವ ಜನತೆ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ಮುಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ಆದರ್ಶ, ಮೌಲ್ಯಗಳನ್ನ ತಿದುಕೊಳ್ಳಬೇಕು. ಒಳ್ಳೆಯ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಡಾ.ಮನು ಗೊರವಾಲೆ ಅವರು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯುವರಾಷ್ಟ್ರ ಎಂದು ಕರೆಸಿಕೊಳ್ಳುವ ಏಕೈಕ ದೇಶ ಭಾರತ ಮಾತ್ರ. ಭಾರತದಲ್ಲಿರುವ ಯುವಕರ ಸಂಖ್ಯೆ ಪಾಶ್ಚಿಮಾತ್ಯ 5 ರಿಂದ 6 ದೇಶಗಳ ಜನಸಂಖ್ಯೆಯಾಗಿದೆ. ಹಾಗಾಗಿ ಭಾರತದ ಯುವ ಸಮೂಹವನ್ನು ಒಳಗೊಂಡಿದೆ. ಪ್ರಸ್ತುತ ಯುವಕರು ಸ್ವಾಮಿ ವಿವೇಕಾನಂದ ಅವರ ಕುರಿತಾಗಿ ಹೆಚ್ಚು ತಿಳಿದುಕೊಳ್ಳಬೇಕು. ಅವರ ಆದರ್ಶ ಮತ್ತು ಮೌಲ್ಯಗಳ ಪಾಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರತರಾಗಬೇಕು ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮುಡಾ ಆಯುಕ್ತರು ಹಾಗೂ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಕೃಷ್ಣಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಸಂಯೋಜಕರಾದ ಡಾ. ಪ್ರಮೀಳಾ ಎಂ.ಬಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಓಂಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

