NEWS

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನವೋದಯ ಪರೀಕ್ಷೆಯ ಪೂರ್ವ ಸಿದ್ಧತಾ ತರಬೇತಿ ನೀಡಿ:

ವಿದ್ಯಾರ್ಥಿಗಳ ಮನಪರಿವರ್ತನೆ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ- ಡಾ.ಕುಮಾರ

ಪಾಲನೆ ನ್ಯೂಸ್

‌ಮಂಡ್ಯ: 5 ನೇ ತರಗತಿಯೊಳಗೆ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ  ನವೋದಯ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತಾಗಿ ಪೂರ್ವ ಸಿದ್ಧತಾ  ತರಬೇತಿ ನೀಡಿ. ಸರ್ಕಾರಿ ಶಾಲೆಯ ಮಕ್ಕಳನ್ನು ನವೋದಯ ಪರೀಕ್ಷೆಯ ಬರೆಯಲು ನೊಂದಾಯಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನವೋದಯ ವಿದ್ಯಾಲಯ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಶಿವಾರಗುಡ್ಡದಲ್ಲಿರುವ ನವೋದಯ ವಿದ್ಯಾಲಯ ಸಂಸ್ಥೆಯು 30 ಎಕ್ಕರೆ ವಿಸ್ತರಣೆದಲ್ಲಿದ್ದು ಪ್ರಸ್ತುತ 522 ವಿದ್ಯಾರ್ಥಿಗಳು ಸದರಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು.

ಸದರಿ ಸಂಸ್ಥೆಯಲ್ಲಿ 51 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಅಭ್ಯಾಸ ಮಾಡಲು ಸುಸರ್ಜಿತವಾದ  ಕಟ್ಟಡವಿದೆ. ಪಠ್ಯೇತರ ಚಟುವಟಿಕೆಗಳಿಗೂ ವಿಶೇಷವಾಗಿ ಒತ್ತು ನೀಡುತ್ತಾ ನವೋದಯ ಸಂಸ್ಥೆ ಬಂದಿದೆ. ಸದರಿ ಸಂಸ್ಥೆಯಲ್ಲಿ ಕೆಲ ವಿದ್ಯುತ್ ಕಂಬಗಳು ಹಳೆಯದಾಗಿದ್ದು ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಹಳೆಯ ಕಂಬಗಳನ್ನು ದುರಸ್ತಿ ಮಾಡಬೇಕು ಎಂದು ತಿಳಿಸಿದರು.

ಸದರಿ ಸಂಸ್ಥೆಯ ಪಕ್ಕದಲ್ಲಿಯೇ ಕಾವೇರಿ ನಾಲೆ ಹರಿಯುತ್ತಿದ್ದು ನಾಲೆಯ ಸುತ್ತ ಗಿಡ ಗಂಟೆಗಳು ಬೆಳೆದಿರುವುದರಿಂದ ಸೊಳ್ಳೆ ಮತ್ತು ಕೀಟಾಣುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ನಾಲೆಯ ಸುತ್ತಲೂ ಬೆಳೆದಿರುವ ಗಿಡ ಗಂಟೆಗಳನ್ನು ತೆರವುಗೊಳಿಸಿ ಹಾಗೂ ಸದರಿ ಸಂಸ್ಥೆಯ ಡ್ರೈನೇಜ್ ಸಿಸ್ಟಮ್ ಹಳೆಯದಾಗಿದೆ ಶೀಘ್ರವೇ ದುರಸ್ಥಿ ಮಾಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ನವೋದಯ ವಿದ್ಯಾಸಂಸ್ಥೆಯ ಆವರಣಗಳಲ್ಲಿ ಕಟ್ಟಡಗಳಿಗೆ ಹೊಂದಿಕೊಂಡಂತೆ ಗಿಡಮರಗಳು ಬೆಳೆದಿದ್ದು ಈಗಾಗಲೇ ಒಣಗಿರುವ ಮರಗಳನ್ನು ತೆರವು ಮಾಡಲು ಸೂಕ್ತ ಕ್ರಮ ಕೈಗೊಳ್ಳಿ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಕರು ವಿಶೇಷ ಮುತುವರ್ಜಿ ವಹಿಸಿ ಸರ್ಕಾರಿ ಶಾಲೆಯ ಮಕ್ಕಳು ನವೋದಯ ಪರೀಕ್ಷೆಯಲ್ಲಿ ನೋಂದಣಿಯಾಗುವಂತೆ  ಕ್ರಮವಹಿಸಿ ಎಂದು ಹೇಳಿದರು.

ಶಿಕ್ಷಣದಲ್ಲಿ ಹಿಂದುಳಿದ ಹಾಗೂ ಮಾನಸಿಕವಾಗಿ ಕುಗ್ಗಿರುವ  ಮಕ್ಕಳ ಪಟ್ಟಿಸಿದ್ಧಪಡಿಸಿ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮಾನಸಿಕ ಕುಗ್ಗಿರುವ  ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿ ಸದರಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಹಾಗೂ ಮನೋವೈದ್ಯರಿಂದ ಆಪ್ತ ಸಮಾಲೋಚನೆಯನ್ನು ನಡೆಸಿ ಎಂದು ಹೇಳಿದರು.

ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸಂಸ್ಕಾರ ಮೌಲ್ಯ ಮತ್ತು ಆದರ್ಶಗಳನ್ನು ಕಲಿಸುವುದು ಶಿಕ್ಷಕರ ಜವಾಬ್ದಾರಿ. ಮಕ್ಕಳಲ್ಲಿ ಇರುವ ಋಣಾತ್ಮಕ ಚಿಂತನೆಗಳನ್ನು ತೆಗೆದು ಧನಾತ್ಮಕ ಚಿಂತನೆಯನ್ನು ಶಿಕ್ಷಕರು ಬೆಳೆಸಬೇಕು. ಶಾಲೆಗಳಿಗೆ ಮಕ್ಕಳು ಮೊಬೈಲ್ ಗಳನ್ನು ತರದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಮಕ್ಕಳ ಮನಃಪರಿವರ್ತನೆ ಮಾಡುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ ಎಂದು ಹೇಳಿದರು.

ಸಭೆಯಲ್ಲಿ ನವೋದಯ ವಿದ್ಯಾಲಯದ ಪ್ರಾಂಶುಪಾಲ ಮೋಹನ್ ಕುಮಾರ್, ಅನನ್ಯ ಆರ್ಟ್ಸ್ ಸಂಸ್ಥೆಯ ಅನುಪಮಾ ಸೇರಿದಂತೆ ನವೋದಯ ವಿದ್ಯಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ರನ್ನರ್ ಅಪ್ ಸ್ಥಾನ ಪಡೆದ ಪದ್ಮಪ್ರಿಯಾ

ಮಹಾಶಿವರಾತ್ರಿ ಪ್ರಯುಕ್ತ ಲಾಡು ಪ್ರಸಾದದಿಂದ ₹1.46 ಕೋಟಿ ಸಂಗ್ರಹ

ಕರ್ನಾಟಕದಲ್ಲಿ 2027ರ ಜನಗಣತಿ‌ ಏ.16ರಂದು ಮನೆ ಪಟ್ಟಿ ಕಾರ್ಯ ಆರಂಭ

Leave a Comment