ಪಾಲನೆ ನ್ಯೂಸ್
ವಿರಾಜಪೇಟೆ: ನಾಡಿನ ಬೆಳವಣಿಗೆಗೆ ಪ್ರತಿಯೊಂದು ಸಮಾಜದ ಕೊಡುಗೆ ಬಹುಮುಖ್ಯವಾಗಿದೆ. ಅದರಲ್ಲೂ ಕೊಡಗಿನ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಗೌಡ ಸಮಾಜದ ಏಳಿಗೆಗೆ ಸರಕಾರದ ವತಿಯಿಂದ ಸಹಾಯ ಮಾಡುವುದು ಅತ್ಯಂತ ಅವಶ್ಯಕ ಎಂಬುದನ್ನು ಮನ ಗಂಡು ತಾನು ಈ ಪ್ರಯತ್ನವನ್ನು ಮಾಡಿದೆ. ಸಮಾಜದ ಏಳಿಗೆಗೆ ಯಾವುದೇ ಬೇಡಿಕೆ ಸಲ್ಲಿಸಿದರೂ ತಾನು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡಗು ಗೌಡ ಸಮಾಜದ ಪ್ರಮುಖರು ಬೇಡಿಕೆಯೊಂದಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿರುವುದು ತನಗೆ ಅತ್ಯಂತ ಸಂತೋಷ ನೀಡಿದೆ ಎಂದು ಹೇಳಿದರು.
ಕೊಡಗು ಗೌಡ ಸಮಾಜಕ್ಕೆ ಸರಕಾರದ ವತಿಯಿಂದ ಮಡಿಕೇರಿ ತಾಲೂಕಿನ ಮದೆಗ್ರಾಮದಲ್ಲಿ 3 ಎಕರೆ ಜಮೀನನ್ನು ಮಂಜೂರು ಮಾಡಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಅವರ ವಿರಾಜಪೇಟೆಯ ಗೃಹ ಕಚೇರಿಯಲ್ಲಿ ಭೇಟಿಯಾಗಿ ಕೊಡಗು ಗೌಡ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಕೊಡಗು ಗೌಡಜನಾಂಗದ ಮುಖ್ಯವಾಣಿಯಂತಿರುವ ಗೌಡ ಸಮಾಜದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲೆಂದು ಶಾಸಕರು

ಈ ಹಿಂದೆ ಸರಕಾರದೊಂದಿಗೆ ಮಾತುಕತೆ ನಡೆಸಿ, 3 ಎಕರೆ ಜಮೀನನ್ನು ಮಂಜೂರು ಮಾಡಿಸಿದ್ದರು. ಶಾಸಕರಿಗೆ ಈ ಪ್ರಯುಕ್ತ ಅಭಿನಂದನೆ ಹಾಗೂ ಧನ್ಯವಾದ ಸಲ್ಲಿಸಲು, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ದಂಬೆಕೋಡಿ ಆನಂದ, ಉಪಾಧ್ಯಕ್ಷೆ ಸೂರ್ತಲೆ ಸೋಮಣ್ಣ, ಕಾರ್ಯದರ್ಶಿ ಸಂದೀಪ್, ನಿರ್ದೇಶಕ ಕೊಲ್ಯದ ಮತ್ತಿತರರು ಭೇಟಿಯಾಗಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಿಗೆ ಅಭಿನಂದನಾ ಪತ್ರವನ್ನು ಸಹ ನೀಡಲಾಯಿತು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


