ಪಾಲನೆ ನ್ಯೂಸ್
ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಏ.2ರಂದು ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ನಂತರ ಭಾನುವಾರ (ಏ.5) ಸುರಕ್ಷಿತವಾಗಿ ಪತ್ತೆಯಾದ ಕೇರಳ ಮೂಲದ ಶರಣ್ಯಾ ತವರಿಗೆ ತೆರಳಿದ್ದಾರೆ. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸೀಬೆತಟ್ಟು ಎಂಬಲ್ಲಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದ ಪಾಂಡಂಡಮಲೆ ಎಂಬಲ್ಲಿ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಶರಣ್ಯಾ ಪತ್ತೆಯಾಗಿದ್ದರು.
ಯಾವಕಪಾಡಿ ಗ್ರಾಮದ ಕೆರೆತಟ್ಟು ಅಡಿಯರ ಕಾಲನಿಯ ನಿವಾಸಿಗಳಾದ ಅಯ್ಯಪ್ಪ, ಮಣಿ, ರಾಜು, ಸುಬ್ರಮಣಿ ತಂಡ ಶರಣ್ಯಾರನ್ನು ಪತ್ತೆಹಚ್ಚಿತ್ತು. ನಂತರ ಕಕ್ಕಬ್ಬೆಯಲ್ಲಿ ನಡೆದ ಆರೋಗ್ಯ ತಪಾಸಣೆ ವೇಳೆ ಇವರ ಆರೋಗ್ಯ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಕೇರಳಕ್ಕೆ ಮರಳಿದ್ದಾರೆ. ಕೇರಳದ ಕೋಜಿಕೋಡು ಜಿಲ್ಲೆ ನಾದಪುರ ಗ್ರಾಮದ ಕೆ. ಗೋಪಿ ಹಾಗೂ ಶೈಲಜಾ ದಂಪತಿಯ ಇಬ್ಬರು ಮಕ್ಕಳಲ್ಲಿ ಶರಣ್ಯಾ ಒಬ್ಬರಾಗಿದ್ದು ಕೊಚ್ಚಿಯಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ.
ಅನುಮಾನ ಮೂಡಿಸಿದ ಶರಣ್ಯಾ ನಡೆ: ಈ ಮಧ್ಯೆ ಶರಣ್ಯಾ ಪ್ರಕರಣ

ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೇವಲ ನೀರು ಸೇವಿಸಿಕೊಂಡು ನಾಲ್ಕು ಹಗಲು, ಮೂರು ರಾತ್ರಿ ಕಾಡಿನೊಳಗೆ ಕಳೆದಿದ್ದರೂ ಒಂದಿಷ್ಟೂ ಆಯಾಸ ಅವರಲ್ಲಿ ಕಾಣಿಸಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಟ್ಟೆ ಕೊಳೆಯಾಗದಿರುವುದು, ಕಾಡಿನಲ್ಲಿ ಇದ್ದರೂ ಸೊಳ್ಳೆ ಸೇರಿ ಕೀಟಗಳ ಕಡಿತಕ್ಕೆ ಒಳಗಾಗದಿರುವುದು, ಈ ವ್ಯಾಪ್ತಿಯಲ್ಲಿ ಮಳೆ ಬಂದಿದ್ದರೂ ನೆನೆದ ಲಕ್ಷಣಗಳು ಕಾಣಿಸಿಕೊಳ್ಳದಿರುವುದು ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಎಸ್ಪಿ ನೇತೃತ್ವದಲ್ಲಿ ಕೂಲಂಕಷ ತನಿಖೆ ಆಗಿ ಸತ್ಯಾಸತ್ಯತೆ ಬಯಲಿಗೆ ಎಳೆಯಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
