ಪಾಲನೆ ನ್ಯೂಸ್
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕು, ಅರಕೆರೆ ಹೋಬಳಿ ಬನ್ನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವು ಸಂಭ್ರಮದಿಂದ ಶುಕ್ರವಾರ ಸಂಜೆ ಜರುಗಿತು.
ಸಮಾರಂಭವನ್ನು ಉದ್ಘಾಟಿಸಿದ ಶಿಕ್ಷಣ ಸಂಯೋಜಕರಾದ ಬಾಲಕೃಷ್ಣ ಅವರು ಮಾತನಾಡಿ,” ನಾವು ದೇವಾಲಯಕ್ಕೆ ಕೊಡಮಾಡುವ ಪ್ರಾಶಸ್ತ್ಯವನ್ನು ಶಾಲೆಗೂ ನೀಡಬೇಕು. ವ್ಯಕ್ತಿಯ ಮತ್ತು ದೇಶದ ಅಭಿವೃದ್ಧಿಗೆ ಶಾಲೆಯು ಜ್ಞಾನ ದೇಗುಲ. ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಹಲವು ಗಮನಾರ್ಹ ಸೌಲಭ್ಯಗಳಿದ್ದು ಅರ್ಹತೆ ಆಧಾರಿತವಾದ ಸಮರ್ಥ ಶಿಕ್ಷಕರು ಇರುತ್ತಾರೆ. ಶಿಕ್ಷಕರು ಮತ್ತು ಸಮುದಾಯ ಸಮನ್ವಯ ಸಾಧಿಸುವ ಮೂಲಕ ಸರ್ಕಾರಿ ಶಾಲೆಗಳು ಪ್ರಗತಿಯತ್ತ ಮುನ್ನಡೆಯಬೇಕು” ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷರಾದ ಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಣ ಸಂಯೋಜಕರಾದ ನಂಜುಂಡಾಚಾರ್, ಪಾಲನೆ ಪತ್ರಿಕೆಯ ಸಂಪಾದಕ ಚಂದ್ರಶೇಖರ ದ.ಕೋ.ಹಳ್ಳಿ, ನೇರಲೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ನೇರಲಕೆರೆ ಲೋಕೇಶ್, ಬನ್ನಹಳ್ಳಿ ಗ್ರಾಮದ ಶಿಕ್ಷಣಾಸಕ್ತರಾದ ಮಧು, ವಿಶ್ವ, ಪ್ರದೀಪ್ ಅತಿಥಿಗಳಾಗಿದ್ದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಮಹೇಶ್, ರಾಜೇಶ್ , ಭಾರತಿ, ಪಲ್ಲವಿ, ಅನಿತಾ, ಶಿಲ್ಪ, ಮಕ್ಕಳ ಮನೆಯ ಶಿಕ್ಷಕಿ ನಾಗವೇಣಿ, ಸಹಾಯಕಿ ಸೌಮ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕೊತ್ತತ್ತಿ ರಾಜು ಸ್ವಾಗತಿಸಿ, ನಿರೂಪಿಸಿದರು. ಹಿರಿಯ ಶಿಕ್ಷಕ ಮಂಜುನಾಥ್ ಆಶಯ ನುಡಿಗಳನ್ನಾಡಿದರು.

ಗಮನ ಸೆಳೆದ ಬಾಲಕ, ಸಾಂಸ್ಕೃತಿಕ ವೈಭವ:
ಒಂದನೇ ತರಗತಿಯ ಲಿಂಗೇಗೌಡ ಸಂವಿಧಾನ ಪೀಠಿಕೆಯನ್ನು ಕಂಠಪಾಠ ಮಾಡಿ ಓದಿ ಅಚ್ಚರಿ ಮೂಡಿಸಿದನು. ಸರ್ಕಾರಿ ಶಾಲೆ ಮಕ್ಕಳು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿ ಗಣ್ಯರಿಂದ ಬಹುಮಾನವನ್ನು ಗಿಟ್ಟಿಸಿದ.
ಅಂಗನವಾಡಿಯ ಮಕ್ಕಳು ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಿನಿಮಾ ಹಾಗೂ ಜನಪದ ಗೀತೆಗಳಿಗೆ ನೃತ್ಯ ಮಾಡಿ ಪ್ರತಿಭೆ ಮೆರೆದರು. ಪ್ರಹಸನಗಳನ್ನು ಮಾಡಿ ತಮ್ಮ ಅಭಿನಯ ಕಲೆಯನ್ನೂ ಪ್ರದರ್ಶಿಸಿದರು. ತಮ್ಮ ಮಕ್ಕಳ ನೃತ್ಯ, ಹಾಡು, ವಿನೋದಗಳನ್ನು ಕಂಡು ಪೋಷಕರು ಹಾಗೂ ಗ್ರಾಮಸ್ಥರು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಪೋಷಕರಿಗೂ ಜ್ಞಾನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
