ಮೈಸೂರಿನ ಜಮ್ನಾಲಾಲ್ ಬಜಾಜ್ ಸಾಹುಕಾರ್ ಚನ್ನಯ್ಯನವರು
ಪಾಲನೆ ಇತಿಹಾಸ ಇಣುಕು

ಮೈಸೂರಿನ ಸುಪ್ರಸಿದ್ದ ನಿವಾಸಿಗಳು ಆದ ಸಾಹುಕಾರ್ ಚನ್ನಯ್ಯನವರು ವಿದ್ಯಾ ಪ್ರಚಾರಕ್ಕಾಗಿ ಸುಮಾರು ಐವತ್ತು ಸಾವಿರ ರೂಪಾಯಿಗಳನ್ನು ದಾನ ಮಾಡಿರುತ್ತಾರೆ. ಅದಕ್ಕಾಗಿ ನಾವು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಜರ ಬಾದಿನಲ್ಲಿರುವ ತಮ್ಮ ಒಂದು ಭಾರಿ ಬಂಗಲೆಯನ್ನೂ ಒಂಟಿಕೊಪ್ಪಲಿನಲ್ಲಿ ಅನಾಥಾಲಯಕ್ಕಾಗಿ ಒಂದು ನಿಲಯವನ್ನೂ ಮತ್ತು ಬೆಳಗೊಳದ ಬಳಿ ಮೂರು ಎಕರೆ ಜಮೀನನ್ನೂ ಧರ್ಮಾರ್ಥವಾಗಿ ಬಿಟ್ಟು ಕೊಟ್ಟು, ಒಟ್ಟು ಸುಮಾರು ಐವತ್ತು ಸಾವಿರ ರೂಪಾಯಿಗಳನ್ನು ದಾನಮಾಡಿರುತ್ತಾರೆ.
ಇವರ ತಂದೆ ತೀರ್ಥರೂಪರಾದ ಸಾಹುಕಾರ್ ಸಿದ್ದಪ್ಪನವರ ಕಾಲದಿಂದಲೂ ಈ ತರಹದ ಧರ್ಮ ಕಾರ್ಯವನ್ನು ಮಾಡಬೇಕೆಂಬ ಆಲೋಚನೆಯಿತ್ತು. ಈಚೆಗೆ ನಡೆದ ಕೆಲವು ವಿದ್ಯಮಾನಗಳಿಂದ ಇದು ಪುಷ್ಟಿಕರಿಸಲ್ಪಟ್ಟಿತು. ಸಾಹುಕಾರ್ ಚನ್ನಯ್ಯನವರು ಕಾಂಗ್ರೆಸ್ಸಿಗೆ ಸೇರಿದಮೇಲೆ ಈ ಸಂಕಲ್ಪವು ಕಾರ್ಯರೂಪವಾಗಿ ಪರಿಣಮಿಸಿತು. ಅವರು ತ್ರಿಕರಣ ಪೂರ್ವಕವಾಗಿಯೂ ಈಶ್ವರ – ಪ್ರೀತ್ಯರ್ಥವಾಗಿಯೂ ಧರ್ಮವನ್ನು ಮಾಡಿರುತ್ತಾರೆ. ಮೊನ್ನೆ ಶ್ರೀ ಕೆ. ಎಫ್. ನಾರೀಮನ್ನರು ಮೈಸೂರಿಗೆ ಬಂದಿದ್ದಾಗ, ಶ್ರೀ ಸಾಹುಕಾರ್ ಚನ್ನಯ್ಯನವರ ಧರ್ಮ ಬುದ್ಧಿಯನ್ನೂ ದೇಶ ಸೇವಾ ತತ್ಪರತೆಯನ್ನೂ ನೋಡಿ ಇವರು ಮೈಸೂರಿನ ಜಮ್ನ ಲಾಲ್ ಬಜಾಜರೆಂದು ಹೇಳಿದರು.
ಸೇತ್ ಜಮಾಲಾಲ್ ಬಜಾಜರು ತಮ್ಮ ಅಷ್ಟಯ್ ಶ್ವರ್ಯವನ್ನೂ ಕಾಂಗ್ರೆಸ್ಸಿಗೆ ಧಾರೆಯೆರೆದು ತಾವೂ ಸಹ ಹೇಗೆ ಪ್ರಜಾಸೇವೆ ಮಾಡುತ್ತಿರುವರೋ, ಹಾಗೆಯೇ ಶ್ರೀ ಸಾಹುಕಾರ್ ಚನ್ನಯ್ಯನವರೂ ಮಾಡುತ್ತಿರುವರೆಂದು ಎಫ್. ಕೆ. ನಾರಿಮನ್ ಅಭಿಪ್ರಾಯಪಟ್ಟರು.
ನಿರಾಡಂಬರದಿಂದಲೂ ಆತ್ಮ ಪ್ರೇರಣೆಯಿಂದಲೂ ಮಾಡಿದ ಇಂತಹ ಧರ್ಮಕಾರ್ಯಗಳು ಶಾಶ್ವತವಾದ ದೇಶ ಕಲ್ಯಾಣವನ್ನುಂಟು ಮಾಡುವುವು. ಸಾಹುಕಾರ್ ಚನ್ನಯ್ಯ ನವರಿಗೆ ಭಗವಂತನು ಆಯುಷ್ಯ ಆರೋಗ್ಯ ಧರ್ಮ ಬುದ್ಧಿಯನ್ನು ಕೊಟ್ಟು ಕಾಪಾಡಲೆಂದು ಹಾರೈಸುವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಫ್. ಕೆ. ನಾರಿಮನ್ ಹರಸಿದರು.

ಹಿರಿಯ ಸ್ವತಂತ್ರ ಹೋರಾಟಗಾರರಾದ ಎಫ್. ಕೆ. ನಾರಿಮನ್ ಬೆಂಗಳೂರಿನ ಬನ್ನಪ್ಪ ಪಾರ್ಕ್ ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿದ ನಂತರ, ಮೈಸೂರಿಗೇ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ ಧಾನ್ಯ ವರ್ತಕರಾದ ಸಾಹುಕಾರ್ ಚೆನ್ನಯ್ಯರ ಉದಾರತೆಯನ್ನು ಮೈಸೂರಿನ ಕಾಂಗ್ರೆಸ್ ಸಭೆಯಲ್ಲಿ ಕೊಂಡಾಡಿದರು. ಎಫ್. ಕೆ. ನಾರಿಮನ್ ಹೆಸರಿನಲ್ಲಿ ಮುಂಬೈನ ಪ್ರದೇಶವೊಂದಕ್ಕೆ ನಾರಿ ಮನ್ ಪಾಯಿಂಟ್ ಅಂತ ನಾಮಕರಣ ಮಾಡಲಾಗಿದೆ.
ಸುದ್ದಿ ಮಾಹಿತಿ: ಸಾಧ್ವಿ ಪತ್ರಿಕೆ ದಿನಾಂಕ : 6-12-1937
ಕೃಪೆ: ಎಸ್. ಪ್ರಕಾಶ್ ಬಾಬು, ಪತ್ರಕರ್ತರು ಹಾಗೂ ಲೇಖಕರು, ಮೈಸೂರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


