ಪಾಲನೆ ನ್ಯೂಸ್
ಮಂಡ್ಯ: ಶಾಲೆಯಿಂದ ಹೊರಗುಳಿದ ಹದಿಹರೆಯದ ಮಕ್ಕಳ ಮೇಲೆ ಶಾಲೆ ಮುಖ್ಯೋಪಾಧ್ಯಾಯರು ನಿಗಾ ವಹಿಸಿ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ 13 ಹೆಚ್ಚು ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದೆ. ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟುವುದ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜವಾಬ್ದಾರಿ ಅಲ್ಲ ಎಲ್ಲಾ ಇಲಾಖೆಗಳು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಶಾಲೆಯಿಂದ ಯಾವುದೇ ಹೆಣ್ಣು ಮಗು ಹೊರಗುಳಿದರು ಅವರ ಮನೆಗಳಿಗೆ ಶೀಘ್ರವೇ ಭೇಟಿ ಪರಿಶೀಲನೆ ನಡೆಸಿ. ವಸತಿ ಶಾಲೆಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಲು ಬರುವ ಪಾಲಕರನ್ನು ಪರಿಶೀಲಿಸಿ. ವಸತಿ ಶಾಲೆಗೆ ವಿದ್ಯಾರ್ಥಿನಿಯರು ದಾಖಲಾಗುವ ಸಂದರ್ಭದಲ್ಲಿ ವಿದ್ಯಾರ್ಥಿಯ ತಂದೆ ತಾಯಿ ಮತ್ತು ಸಹೋದರರ ದೂರವಾಣಿ ಸಂಖ್ಯೆ ಮತ್ತು ಭಾವಚಿತ್ರಗಳನ್ನು ಪಡೆಯಿರಿ. ತಂದೆ ತಾಯಿ ಮತ್ತು ಸಹೋದರರನ್ನು ಹೊರತುಪಡಿಸಿ ಯಾರೇ ಬಂದರೂ ವಿದ್ಯಾರ್ಥಿಯನ್ನು ಕಳಿಸಬೇಡಿ ಎಂದು ಹೇಳಿದರು.
ಸದರಿ ವರ್ಷ ಜಿಲ್ಲೆಯಲ್ಲಿ 17 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬಾಲಕಾರ್ಮಿಕರನ್ನು ಪತ್ತೆ ಹಚ್ಚುವುದರ ಜೊತೆಗೆ ಅವರಿಗೆ ಆಶ್ರಯ ನೀಡಬೇಕು. ತಂದೆ ತಾಯಿ ಇಲ್ಲದ ಅರ್ಹ ಮಕ್ಕಳಿಗೆ ಪದವಿಯವರೆಗೆ ವಿದ್ಯಾಬ್ಯಾಸವನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ ನೋಡಿಕೊಳ್ಳುತ್ತದೆ. ಶಾಲೆಗಳ 200 ಮೀ ವ್ಯಾಪ್ತಿಯಲ್ಲಿ ತಂಬಾಕು ಮಾರಾಟವಾಗದಂತೆ ಕ್ರಮ ವಹಿಸಿ ಎಂದು ಹೇಳಿದರು.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ ಪೌಷ್ಟಿಕತೆಯನ್ನು ವೃದ್ಧಿಸಿ. ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಮಕ್ಕಳ ಫಲಿತಾಂಶವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಿ. ಪ್ರತಿ ವಾರದ ಒಂದು ದಿನದಲ್ಲಿ “ತೆರೆದ ಮನೆ” ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಮಕ್ಕಳ ಕಾನೂನು ಮತ್ತು ಮಕ್ಕಳ ಸಹಾಯವಾಣಿಯ ಕುರಿತು ಅರಿವು ಮೂಡಿಸಿ ಎಂದು ಹೇಳಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ಬಾಲ ಭವನದ ಮಾದರಿ ಬಾಲಕರಿಗೆ ಬಾಲ ಗೌರವ ಪ್ರಶಸ್ತಿ ನೀಡಲಾಗುವುದು. ಸದರಿ ಪ್ರಶಸ್ತಿಗೆ ಜಿಲ್ಲೆಯಿಂದ ನೊಂದಣಿ ಹೆಚ್ಚಿಸಿ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳ ಕುರಿತು ಅಧಿಕಾರಿಗಳು ಶ್ರಮವಹಿಸಿ ಸೂಕ್ತ ನಿವೇಶನ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು.
ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಕಾನೂನಿನ ಕುರಿತು ಅರಿವು ಮೂಡಿಸ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಹಿರಿಯ ಪ್ರಾಥಮಿಕ ಶಾಲೆಯ ಹಂತದಲ್ಲಿ ಮಕ್ಕಳಿಗೆ ಅವರ ಹಕ್ಕುಗಳು ಮತ್ತು ಕಾನೂನಿನ ಕುರಿತಾಗಿ ಪಠ್ಯವನ್ನು ಅಳವಡಿಸಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗಿದ್ದವು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಒಟ್ಟುಗೂಡಿ ಭ್ರೂಣ ಹತ್ಯೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ 35 ಜನರ ಮೇಲೆ ಭ್ರೂಣ ಹತ್ಯೆಯ ಪ್ರಕರಣದ ದಾಖಲಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗಿದೆ. 2025 ರ ಸಾಲಿನಲ್ಲಿ 14 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದೆ. 60 ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.
ಅರಿವಿನ ಕೊರತೆಯಿಂದ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತವೆ ಹಾಗಾಗಿ ಬಾಲ್ಯ ವಿವಾಹದ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಬೇಕಾಗಿದೆ. ಈಗಾಗಲೇ ಶಾಲೆಗಳಿಗೆ ದೀರ್ಘಕಾಲ ರಜೆ ಹಾಕುವ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಮಕ್ಕಳನ್ನು ದತ್ತು ಕೊಡುವಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮಕ್ಕಳನ್ನು ದತ್ತು ಕೊಡುವ ಸಂದರ್ಭದಲ್ಲಿ ಪೋಷಕರ ಆರ್ಥಿಕ ಸ್ಥಿತಿ, ಆರೋಗ್ಯ ಸ್ಥಿತಿಯನ್ನು ನೋಡಿ ದತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ ಚಲುವಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

