NEWS

1.71 ಲಕ್ಷ ಮಾನವ ದಿನಗಳನ್ನು ಬೇಡಿಕೆ ಇರುವ ಗ್ರಾ.ಪಂ. ಗಳಿಗೆ ಮರುಹಂಚಿಕೆ ಮಾಡಲು ಕ್ರಮ

ಪಾಲನೆ ನ್ಯೂಸ್

ಮಂಡ್ಯ: 2026- 27ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ಸಿದ್ಧಪಡಿಸುವಾಗ ಕೂಲಿ ಆಧಾರಿತ ಸಮುದಾಯ ಕಾಮಗಾರಿಗಳನ್ನು ತೆಗೆದುಕೊಳ್ಳಲು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ತಿಳಿಸಲಾಗಿದೆ ಎಂದು ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾಯಕಬಂಧುಗಳಿಗೆ ಜಿ.ಪಂ. ಸಿಇಓ  ನಂದಿನಿ ಕೆ.ಆರ್ ರವರು ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಜನವಾದಿ ಮಹಿಳಾ ಸಂಘಟನೆ ಹಾಗೂ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದ ಅವರು ಪ್ರಸ್ತುತ ಸಾಲಿನಲ್ಲಿ 19 ಲಕ್ಷ ಮಾನವದಿನ ಸೃಜನೆಯ ಗುರಿ ನಿಗಧಿಪಡಿಸಲಾಗಿತ್ತು. ಕಳೆದ 5-6 ವರ್ಷದಿಂದ ನರೇಗಾ ಯೋಜನೆಯಡಿ ಹಲವಾರು ಕಾಮಗಾರಿಗಳಿಗೆ ಸಾಮಾಗ್ರಿ ಮೊತ್ತ ಪಾವತಿಯಾಗದೇ ಬಾಕಿ ಉಳಿದಿರುವುದರಿಂದ, ಬಾಕಿ ಇರುವ ಸಾಮಗ್ರಿ ಮೊತ್ತ ಪಾವತಿಸಲು ಹೆಚ್ಚಿನ ಮಾನವದಿನ ಸೃಜನೆ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೂಲಿ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಲು ಗ್ರಾ.ಪಂ.ಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮಾನವ ದಿನ ಸೃಜನೆಯ ಬೇಡಿಕೆ ಕಡಿಮೆ ಇರುವ ಗ್ರಾಮ ಪಂಚಾಯತ್ ಗಳಿಂದ  1.71 ಲಕ್ಷ ಮಾನವದಿನವನ್ನು ಹಿಂಪಡೆದು ಹೆಚ್ಚು ಮಾನವ ದಿನ ಸೃಜನೆಯ ಬೇಡಿಕೆ ಇರುವ  ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕಿಗೆ ಮರುಹಂಚಿಕೆ ಮಾಡಲಾಗಿದ್ದು, end to end ತಂತ್ರಾಂಶದಲ್ಲಿ ಅಳವಡಿಸಲು ಅನುಮತಿ ನೀಡುವಂತೆ ರಾಜ್ಯ ಕಚೇರಿಯನ್ನು ಕೋರಲಾಗಿದೆ ಎಂದು ತಿಳಿಸಿದರು.

ಸಕ್ರಿಯ ಕೂಲಿಕಾರರು ಹೆಚ್ಚಿರುವ ಗ್ರಾ.ಪಂ.ಗಳಲ್ಲಿ ಕೆಲಸ ನೀಡಲು ಸಾಕಗುವಷ್ಟು ಕಾಮಗಾರಿಗಳು ಲಭ್ಯವಿಲ್ಲದಿದ್ದಲ್ಲಿ, ಕಾಮಗಾರಿಗಳು ಲಭ್ಯವಿರುವ ಗ್ರಾ.ಪಂ.ಗಳಲ್ಲಿ ಕೆಲಸ ನೀಡಲು ತಾ.ಪಂ. ಹಂತದಲ್ಲಿ ಕ್ರಮವಹಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿಗಳ ನಾಮಫಲಕದ ವೆಚ್ಚವನ್ನು ಸಾಮಾಗ್ರಿ ಮೊತ್ತದಲ್ಲೇ ಪಾವತಿಸಬೇಕು. ಕಾಯಕ ಬಂಧುಗಳಿಂದ ನಾಮಫಲಕ ಅಳವಡಿಸಲು ತಿಳಿಸಬಾರದು ಎಂದು ಸೂಚಿಸಿದರು.

ಸ್ಥಳೀಯವಾಗಿ ಅನುಷ್ಠಾನ ಮಾಡಬಹುದಾದ ನರೇಗಾ ಯೋಜನೆಯ ಸಮುದಾಯ ಆಧಾರಿತ ಕಾಮಗಾರಿಗಳ ಪಟ್ಟಿ ಹಾಗೂ ಸದರಿ ಕಾಮಗಾರಿಯಿಂದ ಎಷ್ಟು ಜನ ಕೂಲಿಕಾರರಿಗೆ ಅನುಕೂಲವಾಗುತ್ತದೆ ಎಂಬ ಅಂದಾಜು ಪಟ್ಟಿಯನ್ನು ನೀಡಲು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜನವಾದಿ ಮಹಿಳಾ ಸಂಘಟನೆಯ ಕೂಲಿಕಾರರ ಸಮಸ್ಯೆ ಹಾಗೂ ಬೇಡಿಕೆಯನ್ನು ಲಿಖಿತ ರೂಪದಲ್ಲಿ ಸಲ್ಲಿಸಿದಲ್ಲಿ, ಬೇಡಿಕೆಯ ಅನುಸಾರ ಸಮಸ್ಯೆಗಳನ್ನು ಪರಿಹರಿಸಲು ನಿಯಮಾನುಸಾರ ಕ್ರಮವಹಿಸಲಾಗುವುದು ಎಂದರು.

ಮಹಿಳಾ ಜನವಾದಿ ಸಂಘಟನೆಯ ಬೇಡಿಕೆ: ಕೆಲಸ ಕೇಳುವ ಎಲ್ಲರಿಗೂ ನೂರು ದಿನ ಉದ್ಯೋಗ ನೀಡಬೇಕು. ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಬೇಕು. ಕಾಯಕ ಬಂಧುವಿಗೆ ತರಬೇತಿ ನೀಡಬೇಕು,  ಹೆಚ್ಚಿನ ಕೂಲಿಕಾರರು ಇರುವ ಪಂಚಾಯಿತಿಗೆ ಹೆಚ್ಚಿನ ಮಾನವ ದಿನ ಸೃಜನೆಯ ಗುರಿ ನೀಡಬೇಕು ಹಾಗೂ ಕೆಲವು ಗ್ರಾ.ಪಂ.ಗಳಲ್ಲಿ ಸರಿಯಾಗಿ ಕೆಲಸ ನೀಡುತ್ತಿಲ್ಲ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪಧಾದಿಕಾರಿಗಳು ಹಾಗೂ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕಾಯಕಬಂಧುಗಳು ಹಾಜರಿದ್ದರು.

Related posts

cj roy: ಅಚ್ಚರಿ ವ್ಯಕ್ತಿಯನ್ನ ಸಿ ಜೆ ರಾಯ್‌ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ ಕಾನ್ಫಿಡೆಂಟ್‌ ಗ್ರೂಪ್‌

ಭರ್ಜರಿ ದಾಖಲೆ ಮಾಡಿದ ‘ಬಜೆಟ್ ರಾಮಯ್ಯ’

ಕುಂಭಮೇಳ ಮೊನಾಲಿಸಾ ಪತಿ ಫರ್ಮಾನ್ ವಿರುದ್ಧ ಪೋಕೋ ಕೇಸು ದಾಖಲು

Leave a Comment