NEWS

ಅಧಿಕಾರ ಕಿತ್ತಾಟದ ನಡುವೆಯೇ ಬಜೆಟ್‌ ಮಂಡಿಸುವುದು ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ

ಪಾಲನೆ ನ್ಯೂಸ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ ಅಧಿಕಾರಹಂಚಿಕೆಯ ಗೊಂದಲಗಳು ತಾತ್ಕಾಲಿಕವಾಗಿ ಶಮನವಾದಂತಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಬಜೆಟ್‌ ಮಂಡಿಸುವುದು ಖಚಿತವಾಗಿದೆ. ಆರ್ಥಿಕ ಸಚಿವರೂ ಆಗಿರುವ ಸಿದ್ದರಾಮಯ್ಯನವರು ಇತ್ತೀಚೆಗೆ ಬಜೆಟ್‌ ಪೂರ್ವ ತಯಾರಿಯನ್ನು ಆರಂಭಿಸಿದ್ದಾರೆ. ಬಹುತೇಕ ಮಾರ್ಚ್‌ 6ರಂದು ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌‍ ಹೈಕಮಾಂಡ್‌ ಮೇಲೆ ಒತ್ತಡ ಹಾಕಿ ನಾಯಕತ್ವ ಬದಲಾವಣೆಯಾಗಬೇಕು, ತಮಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದರು.

ಆದರೆ ಕಾಂಗ್ರೆಸ್‌‍ ಹೈಕಮಾಂಡ್‌ ಅಗತ್ಯ ಮನ್ನಣೆ ನೀಡಿದಂತೆ ಕಂಡುಬರುತ್ತಿಲ್ಲ. ಶಿವಕುಮಾರ್‌ ಅವರ ದೆಹಲಿ ಭೇಟಿ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪ್ರತ್ಯೇಕ ಚರ್ಚೆಗೆ ಆಸ್ಪದ ನೀಡದೇ ಇರುವುದು ಬಹುತೇಕ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್‌ ಹೇಳಿದಂತೆ ಅದರಲ್ಲೂ ರಾಹುಲ್‌ ಗಾಂಧಿ ಹೇಳಿದಂತೆಯೇ ಕೇಳುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯನವರಿಗೆ ಯಾವುದೇ ಸೂಚನೆ ನೀಡಿದಂತೆ ಕಂಡುಬಂದಿಲ್ಲ.

ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಿಂದ ಬರಿಗೈಯಲ್ಲಿ ವಾಪಸ್‌‍ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಪೂರ್ವಭಾವಿ ಸಭೆಗಳನ್ನು ಆರಂಭಿಸಿದರು. ಮೊದಲ ದಿನ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಸ್ವಿಟ್ಜರ್ಲೆಂಡ್‌ನ ದಾವೋಸ್‌‍ನಲ್ಲಿ ವಿಶ್ವ ಆರ್ಥಿಕ ಸಮೇಳನದಲ್ಲಿ ಭಾಗವಹಿಸಿದ್ದ ಡಿಸಿಎಂ ಅವರು, ತಮ ಶ್ರಮಕ್ಕೆ ಹೈಕಮಾಂಡ್‌ನಿಂದ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ ಡಿ.ಕೆ ಸಹೋದರನಾಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್‌, ತಮ ಸಹನೆ ಅಸಹಾಯಕತೆ ಅಲ್ಲ ಎಂದಿದ್ದಾರೆ. ಈ ಎಲ್ಲಾ ಗೊಂದಲಗಳು ಅಧಿಕಾರ ಹಂಚಿಕೆಯ ವಿಚಾರವನ್ನು ಮತ್ತೆ ಮುನ್ನಲೆಗೆ ತಂದಿದ್ದವು. ಆದರೆ ಮೂಲಗಳ ಪ್ರಕಾರ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಬಜೆಟ್‌ ಮಂಡಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಕೊರಿಯನ್ ಗೇಮ್‌ ಹುಚ್ಚು: ಮೂವರು ಸೋದರಿಯರು ಬಲಿ

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ದಾಖಲೆ ಮಾಡಿದೆ: ನಿಖಿಲ್ ಆರೋಪ

ಕೊರೋನಾ ರೀತಿ ಹಂಟು ವೈರಸ್ ಪತ್ತೆ: 8 ಜನರಲ್ಲಿ ದೃಢ 3 ಸಾವು

Leave a Comment