NEWS

ಎಲ್ಲಾ ವರ್ಗದವರಿಗೂ ಕಾನೂನು ಅರಿವಿನ ಕಾರ್ಯಾಗಾರ ಅಗತ್ಯ

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ನಿಜವಾಗಿಯೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮ ಸಮಾಜವನ್ನು ನಿರ್ಮಾಣ ಮಾಡಬಹುದು: ಡಾ. ಕುಮಾರ

ಪಾಲನೆ ನ್ಯೂಸ್

‌ಮಂಡ್ಯ: ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ ) ಅಧಿನಿಯಮ 1989(ತಿದ್ದುಪಡಿ) ಅಧಿನಿಯಮ 2015 ಮತ್ತು ನಿಯಮಗಳು 1995(ತಿದ್ದುಪಡಿ ) ನಿಯಮಗಳು ಮತ್ತು ನಾಗರೀಕ ಹಕ್ಕು ರಕ್ಷಣಾ ಕಾಯ್ದೆ 1955 ರನ್ವಯ  ಆಯೋಜಿಸಲಾಗಿದ್ದ ವಿಚಾರಗೋಷ್ಠಿ ಮತ್ತು ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಡಾ. ಕುಮಾರ ಉದ್ಘಾಟಿಸಿದರು.

ಸಮಾಜದ ಎಲ್ಲಾ ವರ್ಗದವರಿಗೂ ಕಾನೂನಿನ ಅರಿವು ಮೂಡಿಸುವ ಕಾರ್ಯಾಗಾರ ಅಗತ್ಯವಿದ್ದು ಕಾನೂನಿನ ಅರಿವು ಇದ್ದಾಗ ಮಾತ್ರ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಎಲ್ಲಾ ಸಮುದಾಯದ ಜನರಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ ) ಅಧಿನಿಯಮ 1989(ತಿದ್ದುಪಡಿ ) ಅಧಿನಿಯಮ 2015 ಮತ್ತು ನಿಯಮಗಳು 1995(ತಿದ್ದುಪಡಿ ) ನಿಯಮಗಳು ಮತ್ತು ನಾಗರೀಕ ಹಕ್ಕು ರಕ್ಷಣಾ ಕಾಯ್ದೆ 1955 ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಾಗಾರವನ್ನು ಆಯೋಜಿಸಬೇಕು. ಆಗ ಮಾತ್ರ ಈ ಕಾಯ್ದೆ ತೀವ್ರತೆ ತಿಳಿಯುತ್ತದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂಧ ಕಾಯ್ದೆಯ ಸದಸ್ಯರು ಮುತುವರ್ಜಿ ವಹಿಸಿ ಪ್ರಯತ್ನಪಟ್ಟರೆ ತಾಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಬಹುದು. ಸದರಿ ಕಾಯ್ದೆಯಡಿ ನ್ಯಾಯಾಲಯಗಳಿಗೆ ಸಾಕ್ಷಿ ಹೇಳಲು ಬರುವ ಸಾಕ್ಷಿದಾರರಿಗೆ ಧೈರ್ಯ ತುಂಬುವ ಕೆಲಸವಾಗಬೇಕು ಎಂದರು.

ಕಾರ್ಯಾಗಾರವನ್ನು ಮಾಡುವ ಮೂಲಕ ಅಸ್ಪೃಶ್ಯತೆಯನ್ನು ಈಗಲೂ ಜೀವಂತವಾಗಿ ಉಳಿಸಿರುವುದು ತಪ್ಪು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಬೇಕಿದೆ. ಅಸ್ಪೃಶ್ಯತೆಯನ್ನು ಆಚರಿಸಿದರೆ ಏನೆಲ್ಲಾ ಕಾಯ್ದೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶ ಸಮಾಜಕ್ಕೆ ಹೋಗಬೇಕು ಎಂದು ಹೇಳಿದರು.

ಎಲ್ಲಾ ದೌರ್ಜನ್ಯ ಪ್ರಕರಣಗಳನ್ನು ಕಾನೂನಿನ ಮೂಲಕವೇ ಪರಿಹರಿಸುತ್ತೇವೆ ಎಂದರೆ ಪ್ರಯೋಜನವಿಲ್ಲ. ಸಮಾಜದಲ್ಲಿ ಮನಪರಿವರ್ತನೆ ಆಗಬೇಕು. ಜನರಿಗೆ ಅರಿವು ಹೆಚ್ಚಾಗಬೇಕು. ಹೀಗಿದ್ದಾಗ ಮಾತ್ರ ಸಮಾಜದಿಂದ ಅಸ್ಪೃಶ್ಯತೆಯನ್ನು ಹೋಗಲಾಡಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.

ಪರಿಶಿಷ್ಟರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಕಾಯ್ದೆ ಇದ್ದರೂ ಸಹ ಇನ್ನೂ ಪ್ರಸ್ತುತ ಸಮಾಜದಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಎಂದರೆ ನಮ್ಮನ್ನು ನಾವೇ ಅವಲೋಕಿಸಿಕೊಳ್ಳಬೇಕು. ಸದರಿ ಕಾಯ್ದೆ ಬಂದಾಗ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿತ್ತು. ಆದರೆ, ಇಂದು ಸುಶಿಕ್ಷಿತ ಸಮಾಜದಲ್ಲಿ ಇದ್ದೇವೆ. ಅರಿವಿನ ಸಂಖ್ಯೆ ಹೆಚ್ಚು ಇದೆ  ಹೀಗಿದ್ದಾಗಿಯೂ ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಎಂದರೆ ಇದು ನಾಗರೀಕ ಸಮಾಜದ ಗುಣಲಕ್ಷಣವಲ್ಲ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಸಮಾನತೆಯಿಂದ ಬದುಕಲು ಎಲ್ಲರೂ ಶ್ರಮಿಸಬೇಕಾಗುತ್ತದೆ. ಡಾ.ಬಿ.ಆರ್ ಅಂಬೇಡ್ಕರ್  ಅವರ ಆದರ್ಶಗಳು ಮೌಲ್ಯಗಳು ಚಿಂತನೆಗಳು ಮತ್ತು ಕೊಡುಗೆಗಳು ಇನ್ನೂ ಸಮಾಜದಲ್ಲಿ ಜೀವಂತವಾಗಿ ಉಳಿದಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ನಿಜವಾಗಿಯೂ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.

ಬರಿ ಮಾತಿನಲ್ಲಿ  ಸಮ ಸಮಾಜ ನಿರ್ಮಾಣ ಮಾಡುವ ಬದಲು ಪ್ರತಿಯೊಬ್ಬರು “ಮನುಷ್ಯ ಕುಲಂ ತಾನೊಂದೇ ವಲಂ”  ಸಿದ್ಧಾಂತವನ್ನು ಅನುಸರಿಸಿ ಬಾಳಿದ್ದೇ ಆದಲ್ಲಿ ಸಮಾಜದಲ್ಲಿನ ಅಸ್ಪೃಶ್ಯತೆ ಮತ್ತು ದೌರ್ಜನ್ಯವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ್  ಎಂ. ಅವರು ಮಾತನಾಡಿ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಆಗುತ್ತಿದೆ. ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆ ಇದ್ದು  ಈ ಕಾಯ್ದೆಯ ಕುರಿತು ಜನರಿಗೆ ಅರಿವು ಮೂಡಿಸುವ  ಕಾರ್ಯಕ್ರಮಗಳು ಆಗಬೇಕಿದೆ ಎಂದರು.

ಪರಿಶಿಷ್ಟ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವಂತಹ ಕೆಲಸಗಳು ನಡೆದಾಗ ಮಾತ್ರ ಸದರಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಅರಿವು ಮೂಡಿಸುವ ಕಾರ್ಯಕ್ರಮಗಳು ಮಾಡಬೇಕು. ಈ ಕಾಯ್ದೆಯಡಿ ನೋಂದಣಿಯಾದ ಪ್ರಕರಣಗಳು ಸಮರ್ಪಕವಾಗಿ ತನಿಖೆ ಆಗಬೇಕು. ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಸವಣ್ಣ ರವರ ಆದರ್ಶಗಳು, ಚಿಂತನೆಯತ್ತ ನಾವು ನಡೆಯಬೇಕು. ಜಾತ್ಯತೀತ ರಾಷ್ಟ್ರವಾಗಿ ಎಲ್ಲಾ ಧರ್ಮಗಳು ಸಾಮರಸ್ಯದಿಂದ ಇರಬೇಕು. ಹಾಗಾದರೆ ಮಾತ್ರ ಸರ್ವಧರ್ಮ ಸಮನ್ವಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ. ಶ್ರೀನಿವಾಸ್, ಮಂಡ್ಯ ಐದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ರಾಜೇಶ್ ಎಚ್. ಸಿ. ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Related posts

“2025ರ ಮೇ ತಿಂಗಳ ಅಪರೇಷನ್ ಸಿಂಧೂರ್ ಸಂಘರ್ಷ ತಡೆಯದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು”

ಟ್ರಂಪ್ ಕ್ಷಮೆಯಾಚನೆ ಬಯಸಿದ ಬ್ರಿಟನ್ ಪ್ರಧಾನಿ: ನ್ಯಾಟೊ ಪಡೆಗೆ ಅವಮಾನ

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ : ಡಿಕೆಶಿ ಪಾರು

Leave a Comment