NEWS

ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಜಿ.ಪಂ.ಸಿ.ಇ.ಓಭೇಟಿ

ಪಾಲನೆ ನ್ಯೂಸ್

ಮಂಡ್ಯ: ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ಕೊಟ್ಟ ಜಿ. ಪಂ. ಸಿ.ಇ.ಓ ನಂದಿನಿ ಕೆ.ಆರ್. ರವರು ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಸಂವಾದ ನಡೆಸಿ, ವಿದ್ಯಾರ್ಥಿಗಳ ಕುಂದು ಕೊರತೆಗಳನ್ನುಆಲಿಸಿದರು.

ಕಳೆದ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಪರಿಣಾಮ ಮತ್ತೆ ಈ ಮಟ್ಟದ ಫಲಿತಾಂಶ ಬರಬಾರದೆಂದು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಶಿಕ್ಷಕರ ಜೊತೆ ಕಲಿಕೆಯ ಹಾಗೂ ಬೋಧನೆಯ ವರದಿ ಪಡೆದರು.

ಶಾಲೆಯಲ್ಲಿ ಶಿಕ್ಷಕರ ಬೋಧನೆ ಹೇಗಿದೆ ಹಾಗೆಯೇ ಶಾಲೆಯಲ್ಲಿ ಸಂಜೆಯ ನಂತರ ವಿಶೇಷ ತರಗತಿಗಳು ನಡೆಯುತ್ತಿದೆಯೇ ಎಂದು ಮಕ್ಕಳೊಟ್ಟಿಗೆ ಮುಕ್ತಾವಾಗಿ ಚರ್ಚಿಸಿದರು.

ಹಾಗೆ “ಕಲಿಕಾಮಿತ್ರ” ಎಷ್ಟು ಮಕ್ಕಳಿಗೆ ಉಪಯುಕ್ತವಾಗಿದೆ ಎಂಬ ಮಾಹಿತಿ ಸಹ ಪಡೆದರು.
ವಿದ್ಯಾರ್ಥಿಗಳೊಡನೆ “ಕಲಿಕಾಮಿತ್ರ” ಕುರಿತು ಸಂವಾದ ನಡೆಸಿದ ಸಂದರ್ಭದಲ್ಲಿ ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಉಪಯುಕ್ತವಾಗಿದೆ. ಕಾರಣ ಕಲಿಕಾಮಿತ್ರ ಪಠ್ಯವು ಕನ್ನಡದಲ್ಲಿ ಇರುವುದರಿಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಕೊಂಚ ಕಷ್ಟವಾಗಿದೆ, ಹಾಗಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕಾಮಿತ್ರ ಅನುವಾದಗೊಂಡರೆ ನಮಗೆ ಸಹಾಯವಾಗಲಿದೆ ಎಂದು ತಿಳಿಸಿದರು.

ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ವ್ಯವಸ್ಥೆ ಇಲ್ಲದ ಕಾರಣ ಪ್ರಾಥಮಿಕ ಶಾಲೆಯೊಂದರಲ್ಲಿ ಖಾಲಿ ಇರುವ ಕೊಠಡಿಯೊಂದನ್ನು ಆದಷ್ಟು ಬೇಗ ಗ್ರಂಥಾಲಯಕ್ಕೆ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚಿಸಿದರು.

ಶಾಲಾ ಮಕ್ಕಳಿಗೆ ಬಿಸಿಯೂಟದಡಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟದ ವ್ಯವಸ್ಥೆ ಸಿಗುತ್ತಿದೆಯೇ ? ಎಂಬುದರ ಕುರಿತು ಪರಿಶೀಲಿಸಿದರು.

ಕನ್ನಡ ಮಾಧ್ಯಮದಲ್ಲಿ 98 ವಿದ್ಯಾರ್ಥಿಗಳಿದ್ದು, ಶಾಲಾ ಕೊಠಡಿಯು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿಲ್ಲದ ಕಾರಣ ಸ್ಥಳದಲ್ಲಿಯೇ ಶಾಲೆಯಲ್ಲಿನ ಮತ್ತೊಂದು ಬದಲಿ ಕೊಠಡಿಯನ್ನು ಸಿ.ಇ.ಓ ರವರು ಗುರುತಿಸಿ, ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳಾಂತರಿಸುವ ವ್ಯವಸ್ಥೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.

ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, 6 ಜನ ಅತಿಥಿ ಶಿಕ್ಷಕರು ನೇಮಕಗೊಂಡಿದ್ದಾರೆ, ಅದರಲ್ಲಿ ಕೆಲವರು ಬಸ್ಸಿನ ಕೊರತೆಯಿಂದು ಬೇಗ ತೆರಳುವ ಶಿಕ್ಷಕರಿದ್ದಾರೆ ಎಂದು ಮುಖ್ಯೋಪಾಧ್ಯಾಯರು ಸಿ.ಇ.ಓ ರವರಿಗೆ ತಿಳಿಸಿದ ಕಾರಣ, ಅತಿಥಿ ಉಪನ್ಯಾಸಕರಿಗೆ ಮಕ್ಕಳ ವಿಧ್ಯಾಭ್ಯಾಸದ ಕುರಿತು ಒಳಿತಾಗುವ ಹಾಗೆ ಸಹಕರಿಸಿ, ಸಾರಿಗೆ ವ್ಯವಸ್ಥೆ ಸಂಬಂಧಿಸಿದಂತೆ ಬದಲಿ ವ್ಯವಸ್ಥೆ ಮಾಡಿಕೊಂಡು ಶಾಲೆಯ ಅವಧಿಯ ಸಮಯ, ಶಿಸ್ತು ಪಾಲನೆ ಹಾಗೂ ಮಕ್ಕಳ ವಿಧ್ಯಾಭ್ಯಾಸ ಕುರಿತು ಗಮನ ಹರಿಸುವಂತೆ ಸಲಹೆ ನೀಡಿದರು.

ಶಾಲಾ ಕೊಠಡಿಗಳಲ್ಲಿ ವಿಧ್ಯಾರ್ಥಿಗಳಿಗೆ ಬೆಳಕಿನ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಸಿ.ಇ.ಓ ರವರು ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೂಡಲೇ ಬಲ್ಪ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿಶೇಷ ತರಗತಿಗಳು ನಡೆಯುತ್ತಿರುವುದರಿಂದ ಈಗಾಗಲೇ ಎರಡು ತಿಂಗಳ ಹಿಂದೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೊಠಡಿಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆಯೇ? ಇಲ್ಲವೇ? ಎಂಬುವುದರ ಕುರಿತು ಖುದ್ದು ಪರಿಶೀಲಿಸಿ, ಸೂಕ್ತ ಬೆಳಕಿನ ವ್ಯವಸ್ಥೆಯಿಲ್ಲದ ಶಾಲಾ ಕೊಠಡಿಗಳಿಗೆ ಕಾಂಟಿಜೆಸ್ಸಿ ಅಥವಾ ಇತರೆ ಅನುದಾನದಡಿ ಬಲ್ಪ್ಗಳನ್ನು ಅಳವಡಿಸಲು ತಿಳಿಸಲಾಗಿತ್ತು. ಅದರೂ ಸಹ ಶಾಲಾ ಕೊಠಡಿಯಲ್ಲಿ ಬೆಳಕಿನ ವ್ಯವಸ್ಥಗೆ ಬಲ್ಪ್ ಅಳವಡಿಸದ್ದಿದ್ದುರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಸಿ, ಜಿಲ್ಲೆಯ ಎಲ್ಲಾ ಶಾಲೆಯ ಮುಖ್ಯೋಪಾಧ್ಯಯರೊಂದಿಗೆ ಮತ್ತೊಮ್ಮೆ ವಿಡಿಯೋ ಸಂವಾದ ಕಾರ್ಯಕ್ರಮ ನಡೆಸಿ, ಸೂಕ್ತ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿ, ಮುಂದಿನ ದಿನಗಳಲ್ಲಿ ಯಾವುದೇ ಶಾಲೆಯ ಕೊಠಡಿಗಳಲ್ಲಿ ಬೆಳಕಿನ ವ್ಯವಸ್ಥೆಯಿಲ್ಲದಿರುವುದು ಕಂಡು ಬಂದಿಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾವುದು ಎಂದು ಎಚ್ಚರಿಕೆ ನೀಡಿದರು.

ಶಾಲಾ ಮಕ್ಕಳ ಜೊತೆ ಬಿಸಿಯೂಟ ಸವಿದ ಸಿ.ಇ.ಓ

ನಾಗಮಂಗಲ ತಾಲ್ಲೂಕಿನ ಚಿಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಮಕ್ಕಳ ಹಾಗೂ ಶಿಕ್ಷಕರ ನಡುವೆ ವಿಧ್ಯಾಭ್ಯಾಸದ ಕುರಿತು ಹಾಗೂ ಶಾಲೆಯ ಬಿಸಿಯೂಟದ ವ್ಯವಸ್ಥೆ ಕುರಿತು ಮಾಹಿತಿ ಪಡೆದರು.

ಶಾಲಾ ಮಕ್ಕಳ ಜೊತೆ ಕೂತು ಮಧ್ಯಾಹ್ನದ ಬಿಸಿಯೂಟ ಸವಿದು ಮಕ್ಕಳ ಖುಷಿಗೆ ಪಾತ್ರರಾದರು.
ಹಾಗೆ ಕಳೆದ ವರ್ಷಕ್ಕಿಂತ ಈ ವರ್ಷ ಎಷ್ಟು ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದಾರೆ ಎಂದು ಗಮನಿಸಿ ಮಕ್ಕಳ ಉನ್ನತ ಅಭಿವೃದ್ಧಿಗೆ ಶಿಕ್ಷಕರು ಪಾತ್ರರಾಗಬೇಕೆಂದು ತಿಳಿಸಿದರು.

ಶಾಲೆಯಲ್ಲಿ ಹೆಣ್ಣು ಮಕ್ಕಳು ಫಲಿತಾಂಶ ಶೇಕಡಾ 92.6 ರಷ್ಟಿದ್ದು, ಗಂಡು ಮಕ್ಕಳು ಸಹ ಮುಂದಿನ ಒಂದು ತಿಂಗಳೊಳಗೆ ಧೀರ್ಘ ಅಭ್ಯಾಸ ನಡೆಸಿ, ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಬೇಕೆಂದು ತಿಳಿಸಿದರು.
ಹಿಂದಿನ ವರ್ಷದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಪೋಟೋವನ್ನು ಶಾಲೆಯಲ್ಲಿದ್ದ ಫಲಕದಲ್ಲಿ ಅಳವಡಿಲಾಗಿತ್ತು, ಸದರಿ ಫಲಕದಲ್ಲಿ ಈ ವರ್ಷದಲ್ಲಿ ಯಾರು ತಮ್ಮ ಪೋಟೋವನ್ನು ಹಾಕಲು ಇಚ್ಛಿಸುತ್ತಿರಿ ಎಂದು ಪ್ರಶ್ನಿಸಿದ ಸಿ.ಇ.ಓ ರವರ ಪ್ರಶ್ನೆಗೆ ಎಲ್ಲಾ ವಿದ್ಯಾರ್ಥಿಗಳು ಕೈ ಎತ್ತುವುದರ ಮೂಲಕ ತಮ್ಮಲ್ಲಿರುವ ಉತ್ಸಾಹವನ್ನು ಪ್ರದರ್ಶಿಸಿ, ಸಿ.ಇ.ಓ ರವರ ಪ್ರಶಂಸೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯವರಾದ ವೀಣಾ ರವರು, ರವಿಕುಮಾರ – ಶಿಕ್ಷಣಾಧಿಕಾರಿ ಅಕ್ಷರ ದಾಸೋಹ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ – ಸುರೇಶ , ನಾಗೇಗೌಡ – ಮುಖ್ಯೋಪಾಧ್ಯಾಯರು ಜಕ್ಕನಹಳ್ಳಿ, ಮಂಜೇಗೌಡ – ಮುಖ್ಯೋಪಾಧ್ಯಾಯರು ಚೀಣ್ಯ, ಪಂಚಾಯಿತಿ ಕಾರ್ಯದರ್ಶಿ – ರಕ್ಷಿತ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಯುವಜನತೆಯು ಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ – ಎನ್.ಚಲುವರಾಯಸ್ವಾಮಿ

6 ವರ್ಷದ ಬಾಲಕಿ ಹತ್ಯೆ: ಗ್ರಾಪಂ ಚುನಾವಣೆ ಹುಚ್ಚು

ಅಂತರ ರಾಷ್ಟೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೂಚನೆ

Leave a Comment