ಪಾಲನೆ ನ್ಯೂಸ್ & ವ್ಯೂಸ್
ಮಂಡ್ಯ: ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು, ಕರ್ನಾಟಕ ಭ್ರಷ್ಟಾಚಾರದ ಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದಿದೆ. ಈ ಪಿಡುಗನ್ನು ತಡೆಯದೇ ಹೋದಲ್ಲಿ ಭವಿಷ್ಯದಲ್ಲಿ ಭೀಕರ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಎಚ್ಚರಿಸಿದರು.
ಇಂದು ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ಮತ್ತು ಮಳವಳ್ಳಿ ತಾಲ್ಲೂಕಿನಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ವರ್ಷದಲ್ಲಿ ಎರಡನೇ ಬಾರಿ ಜಿಲ್ಲೆಗೆ ಭೇಟಿ ಕೊಟ್ಟು ಪ್ರಕರಣಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಕೇಸುಗಳನ್ನು ಜಿಲ್ಲೆಯ ಅಧಿಕಾರಿಗಳು ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಅಶ್ವಾಸನೆ ನೀಡಿದರೆ ಸಾಲದು ಅಧಿಕಾರಿಗಳು ಬದಲಾಗಬೇಕು ಎಂದರು.
ಅಧಿಕಾರಿಗಳು ನಿಮ್ಮ ಅಧಿಕಾರದ ಅವಕಾಶವನ್ನು ಸಾರ್ವಜನಿಕರಿಗೆ ಅನ್ಯಾಯ ಆಗದಂತೆ ಕಾರ್ಯನಿರ್ವಾಹಿಸಿ ನಿಮ್ಮ ಅಧಿಕಾರ ಮಹತ್ವದ ಸಾರ್ಥಕತೆಯನ್ನು ಮೆರೆಯಬೇಕು ಮತ್ತು ಕೆಲಸ ಕಾರ್ಯಗಳಲ್ಲಿ ಮುತುವರ್ಜಿ ವಹಿಸಿ ಕಾರ್ಯನಿರ್ವಾಹಿಸಬೇಕು ಎಂದರು.
ಡಾ. ಬಿ. ಆರ್. ಅಂಬೇಡ್ಕರ್ ರವರು ದೇಶಕ್ಕೆ ಬಲಿಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಉದ್ದೇಶ ಎಲ್ಲರೂ ಸಮಾನವಾಗಿ ಬದುಕುವ ಅವಕಾಶ. ಎಲ್ಲರೂ ಸಂವಿಧಾನ ಬದ್ದವಾಗಿ ಬದುಕಬೇಕು. ಸಾಮಾನ್ಯ ಪ್ರಜೆಗಳಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೂ ಕಾಯಾ, ವಾಚ, ಒಳ್ಳೆಯ ಮನಸಿನಿಂದ ಕಾರ್ಯನಿರ್ವಾಹಿಸಬೇಕು ಎಂದರು.
140 ಭ್ರಷ್ಟಾಚಾರ ದೇಶಗಳಲ್ಲಿ ನಮ್ಮ ಭಾರತ ದೇಶ 91ನೇ ಸ್ಥಾನದಲ್ಲಿದ್ದು ನಮ್ಮ ರಾಜ್ಯ ಭ್ರಷ್ಟಾಚಾರದಲ್ಲಿ 5ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರ ಮುಕ್ತವಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಅಧಿಕಾರಿಗಳಿಂದ ಹಾಗೂ ಪ್ರಜೆಗಳಿಂದ ಬದಲಾಗಬೇಕು ಎಂದು ತಿಳಿಸಿದರು.
ರಾಜ್ಯದ 16 ಜಿಲ್ಲೆಯಲ್ಲಿ 1,281 ಅಕ್ರಮ ಕೇಸ್ ಗಳನ್ನು ಪತ್ತೆ ಮಾಡಲಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಹಾಗೂ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಎಂದರು.
ಅಧಿಕಾರಿಗಳಿಗೆ ಜನಸೇವೆ ಮಾಡಲು ಅಧಿಕಾರವನ್ನು ನೀಡಲಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯನಿರ್ವಾಹಿಸಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳಾದ ಡಾ. ಕುಮಾರರವರು ಮಾತನಾಡಿ, ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ರವರು ಅನ್ಯಾಯದ ವಿರುದ್ಧ ಶ್ರಮಿಸುವವರು. ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿ ಹಾಗೂ ವೃತ್ತಿಯಲ್ಲಿ ನಿಷ್ಠಾವಂತರು ಎಂದರು.
ನ್ಯಾಯ ಮೂರ್ತಿಯಾಗಿ 30 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಿರುತ್ತಾರೆ. ಲೋಕಾಯುಕ್ತ ಅವಧಿಯಲ್ಲಿ 7 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಿರುತ್ತಾರೆ. ಕಾನೂನು ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ವಿಲೇವಾರಿ ಮಾಡಿ ಜನರಿಗೆ ಅನ್ಯಾಯವನ್ನು ತಡೆದು ನ್ಯಾಯವನ್ನು ಕೊಡಿಸಿದವರು ಇವರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಮೂರ್ತಿ ಸುಬ್ರಮಣ್ಯ, ಲೋಕಾಯುಕ್ತ ಎಸ್. ಪಿ. ಸುರೇಶ ಬಾಬು, ಉಪ ಲೋಕಾಯುಕ್ತ ಆಪ್ತ ಕಾರ್ಯದರ್ಶಿ ಅರವಿಂದ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಆನಂದ ಎಂ., ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭರಾಣಿ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಸತ್ಯಾನಂದ ರವರು ಉಪಸ್ಥಿತರಿದ್ದರು.
