ಪಾಲನೆ ನ್ಯೂಸ್
ಜಮ್ಮು: ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ಗುಹಾಂತರ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆ ಜುಲೈ 3 ರಂದು ಆರಂಭವಾಗಲಿದ್ದು, 57 ದಿನಗಳ ಬಳಿಕ ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ. ಯಾತ್ರೆಗೆ ನೋಂದಣಿ ಪ್ರಕ್ರಿಯೆ ಏಪ್ರಿಲ್ 15 ರಿಂದ ಆರಂಭವಾಗಲಿದೆ. 13 ವರ್ಷದಿಂದ 70 ವರ್ಷದೊಳಗಿನ ಭಕ್ತರು ಯಾತ್ರೆ ಕೈಗೊಳ್ಳಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ. ಸಿನ್ಹಾ ಅಧ್ಯಕ್ಷತೆಯಲ್ಲಿ ನಡೆದ ಅಮರನಾಥ ದೇವಾಲಯ ಮಂಡಳಿಯ ಸಭೆಯಲ್ಲಿ ಯಾತ್ರೆಯ ದಿನಾಂಕವನ್ನು ನಿರ್ಧರಿಸಲಾಗಿದೆ. ಈ ಬಾರಿ ಯಾತ್ರೆ ಸ್ವಲ್ಪ ಹೆಚ್ಚು ದಿನ ನಡೆಯಲಿದೆ.

ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಸೇರಿದಂತೆ ನಿಯೋಜಿತ ಬ್ಯಾಂಕ್ಗಳ 556 ಶಾಖೆಗಳ ಮೂಲಕ ಹಾಗೂ ಅಮರನಾಥ ದೇವಾಲಯ ಬೋರ್ಡ್ನ ಅಧಿಕೃತ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಜೇಷ್ಠ ಪೂರ್ಣಿಮೆಯ ಸಂದರ್ಭದಲ್ಲಿ ಜೂನ್ 19 ರಂದು ಅಮರನಾಥ ಗುಹೆಯಲ್ಲಿ ಮೊದಲ ಪೂಜೆ ನಡೆಯಲಿದೆ ಎಂದು ಸಿನ್ಹಾ ಮಾಹಿತಿ ನೀಡಿದ್ದಾರೆ. ಅನಂತ್ನಾಗ್ ಜಿಲ್ಲೆಯ 48 ಕಿ.ಮೀ. ದೂರದ ನೂಲ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್ಬಲ್ ಜಿಲ್ಲೆಯ 14 ಕಿ.ಮೀ. ಉದ್ದದ ಕಡಿದಾದ ಬಲ್ತಾಲ್ ಮಾರ್ಗದ ಮೂಲಕ ಯಾತ್ರೆ ನಡೆಯುತ್ತದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
