ಮಹಿಳಾ ಕಾಲೇಜಿಗೆ ರೂ 1 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಿತ ಕೊಠಡಿ ಒಳಗೊಂಡಂತೆ ಲೇಡಿಸ್ ಲಾಂಜ್ ನಿರ್ಮಾಣ : ಪಿ.ರವಿಕುಮಾರ್
ಪಾಲನೆ ನ್ಯೂಸ್
ಮಂಡ್ಯ: ಜಿಲ್ಲೆಯ ಅಭಿವೃದ್ಧಿ ಮಾಡುವುದು ಆಯಾ ಶಾಸಕರ ಕರ್ತವ್ಯವಾಗಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ಹೇಳಿದರು. ಇಂದು ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜಾನಪದ ಜಾತ್ರೆ -2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ) ರೂ 1 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಣ ಕೊಠಡಿ ಒಳಗೊಂಡಂತೆ ಲೇಡಿಸ್ ಲಾಂಜ್ ನಿರ್ಮಾಣ ಮಾಡಲು ಅನುಮತಿ ದೊರೆತಿದ್ದು ಇನ್ನೂ ಹತ್ತು ದಿನಗಳ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಕಾಂಪೌಂಡ್ ಗಳು ಶಿಥಿಲಗೊಂಡಿದ್ದು ಸದರಿ ಕಾಂಪೌಂಡ್ ಅನ್ನು ದುರಸ್ತಿ ಮಾಡಲು ರೂ 3 ವೆಚ್ಚದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದರಿ ಕಾಲೇಜಿನ ಹೆಬ್ಬಾಗಿಲನ್ನು ಸುಸಜ್ಜಿತವಾಗಿ ಸದರಿ ವರ್ಷ ನಿರ್ಮಾಣ ಮಾಡಲಾಗುವುದು. ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವ್ಯಯಕ್ತಿಕವಾಗಿ ರೂ 3 ಲಕ್ಷವನ್ನು ಹಿಂದಿನಂತೆ ಸದರಿ ವರ್ಷವೂ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳು ಪ್ರಶಸ್ತಿ ಪಡೆಯು ನಿಟ್ಟಿನಲ್ಲಿ ಓದಬೇಕು, ಬದುಕಿನಲ್ಲಿ ಮುಂದೆ ಬರಬೇಕು ಆಗ ಮಾತ್ರ ನಿಮ್ಮ ಕಾಲೇಜು ಮುಂದೆ ಬರಲು ಸಾಧ್ಯವಾಗುತ್ತದೆ. ಏಪ್ರಿಲ್ 30 ರಂದು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ 1 ಲಕ್ಷ ವಿದ್ಯಾರ್ಥಿಗಳೊಳಗೊಂಡಂತೆ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭಾಗವಹಿಸಿ ಎಂದು ಕರೆ ನೀಡಿದರು.

ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಬೊಂಬೆ ಕುಣಿತ, ತಮಟೆ, ನಗಾರಿ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಮೆರವಣಿಗೆ ಸಾಗಿತು. ಶಾಸಕ ರವಿಕುಮಾರ್ ಅವರು ಎತ್ತಿನಗಾಡಿ ಮೂಲಕ ವೇದಿಕೆ ಬಂದಿಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಕೆ. ಗುರುರಾಜ್ ಪ್ರಭು, ಖ್ಯಾತ ಜಾನಪದ ಗಾಯಕ ಉಮೇಶ್ ಶಿವಾರ, ಕಾಲೇಜಿನ ಸಿಬ್ಬಂದಿಗಳಾದ ದಾನೇಗೌಡ, ಗುಲ್ಲೇ ಆರೀಫ್, ಕೆ. ಪಿ. ರವಿ ಕಿರಣ್, ಹೇಮಲತಾ ಎಸ್.ಪಿ ಸೇರಿದಂತೆ ಅನುಶ್ರೀ, ಕೌಸಲ್ಯ ಎಸ್ ಇನ್ನಿತರರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
