ಕುಣಿಗಲ್ : ನಿಮ್ಮ ರಾಜಕೀಯ ಬೇರೆ ಕಡೆ ಇಟ್ಟುಕೊಳ್ಳಿ. ಮೊದಲು ನ್ಯಾಯ ಬೇಡಿ ಬಂದವರಿಗೆ ನ್ಯಾಯ ನೀಡುವುದನ್ನು ಕಲಿತುಕೊಳ್ಳಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಇಲ್ಲಿನ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಗಂಡನಿಂದ ಹಲವು ಬಾರಿ ಹಲ್ಲೆಗೊಳಗಾದ ಮಹಿಳೆ ತನ್ನ ನೋವನ್ನು ಅಧ್ಯಕ್ಷರ ಮುಂದೆ ತೋಡಿಕೊಂಡು ನ್ಯಾಯ ನೀಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಅವರ ಮಾತು ಕೇಳಿಸಿಕೊಂಡ ಅಧ್ಯಕ್ಷರು ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ಮಾಧ್ಯಾನಾಯಕ್ ಅವರಿಗೆ ಸಾರ್ವಜನಿಕರ ಎದುರೆ ತರಾಟೆಗೆ ತೆಗೆದುಕೊಂಡರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಅವರು, ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮಹಿಳಾ ಕೊಠಡಿಗಳು ಶೌಚಾಲಯಗಳು ಆಡಳಿತ ಸೇರಿದಂತೆ ಕುಡಿಯುವ ನೀರಿನ ಘಟಕ ಅಲ್ಲದೆ ಚಿಕಿತ್ಸೆಗೆ ಬಂದಿದ್ದ ರೋಗಿಗಳನ್ನು ವಿಚಾರಿಸುವ ಮೂಲಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿ ಸೇರಿದಂತೆ ಇತರೆ ಕೆಲ ವೈದ್ಯರಿಗೆ ಎಚ್ಚರಿಕೆ ನೀಡಿದರು.
ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಆಗುವಂತೆ ಸಮರ್ಪಕವಾಗಿ ವ್ಯವಸ್ಥೆಯನ್ನು ಕಲ್ಪಿಸಬೇಕಿತ್ತು, ಸರ್ಕಾರ ಔಷಧಿಗಳನ್ನು ಉಚಿತವಾಗಿ ನೀಡುತ್ತಿದೆ. ನೀವು ನೋಡಿದರೆ ಔಷಧಿಗಳನ್ನು ಕೊಡದೆ ಹೊರಗಡೆ ಬರೆದುಕೊಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಸತೀಶ್ ಬಾಬು, ಡಾ. ಜಗದೀಶ್, ಡಾ. ಮರಿಯಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು , ಸುಮತಿ, ಸೇರಿದಂತೆ ಇತರರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

