ಪಾಲನೆ ನ್ಯೂಸ್
ಮಂಡ್ಯ: 18 ವರ್ಷದೊಳಗಿನ ಗಂಡಾಗಲಿ ಅಥವಾ ಹೆಣ್ಣು ಮಕ್ಕಳಾಗಲಿ ತಪ್ಪು ಮಾಡಿದಾಗ ಬಾಲಪರಾಧಿಯಡಿ ಸಮಾನ ಶಿಕ್ಷೆ ಆಗಲಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಎಸ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಸೇಂಟ್ ಜೋಸೆಫ್ ಕಾನ್ವೆಂಟ್ ಮತ್ತು ಕಾಲೇಜು ಆಫ್ ಟೀಚರ್ ಎಜುಕೇಶನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಸೇಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಅಂಗವಾಗಿ ಬಾಲ್ಯ ವಿವಾಹ, ಪೊಕ್ಸೊ ಕಾಯ್ದೆಯಡಿ ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ನ್ಯಾಯ ಕಾಯ್ದೆ 2015ರ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳು ತಪ್ಪು ಮಾಡಿದಾಗ ಅದನ್ನು ತಿದ್ದುವ ಕೆಲಸ ಶಿಕ್ಷಕರು ಮಾಡಿದರೆ ಆ ಮಕ್ಕಳು ಮುಂದೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಹಕಾರ ಮಾಡಿದಂತಾಗುತ್ತದೆ. ಈ ದೇಶ ನಿಂತಿರುವುದು ಯುವಶಕ್ತಿ ಆಧಾರದ ಮೇಲೆ. ಮುಂದೆ ಬರುವ ಯುವಶಕ್ತಿಯನ್ನು ತಯಾರು ಮಾಡುವ ಮಾದರಿ ಶಿಕ್ಷಕರಾಗಿ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ರೋಹಿತ್ ಮಾತನಾಡಿ, ಮಕ್ಕಳು ತಪ್ಪು ಮಾಡಿದಾಗ ಬಾಲ ಅಪರಾಧಿ ಎನ್ನುವ ಪದ ಬಳಸದೆ ತಪ್ಪು ಮಾಡಿದವನು ಎಂದು ಕರೆಯಬೇಕು. ಹಾಗೆಯೇ ಅತ್ಯಾಚಾರ ಎಂಬ ಪದ ಬಳಸದೆ ಲೈಂಗಿಕ ಹಲ್ಲೆ ಎಂಬ ಪದ ಬಳಸಬೇಕು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಕಾನ್ವೆಂಟ್ನ ಮ್ಯಾನೇಜರ್ ಸಿಸ್ಟರ್ ವೀಣಾ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಮಕ್ಕಳ ರಕ್ಷಣೆ ಅಧಿಕಾರಿ ಎಸ್. ರಶ್ಮಿ , ಪ್ರಾಂಶುಪಾಲ ಜಯಶಂಕರ್, ಉಪನ್ಯಾಸಕಿ ಮಮತಾ, ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ, ಕಾರ್ಯಕ್ರಮ ಸಂಯೋಜಕಿ ಸುಮಿತ್ರ ಭಾಗವಹಿಸಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


